ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಹೊರಗುತ್ತಿಗೆ ಕಾರ್ಮಿಕರ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದೆ.
ದತ್ತಾಂಶ ನಮೂದಿಸುವ ಸಿಬ್ಬಂದಿಯಾಗಿ (ಡಿಇಒ) ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವರ ಸೇವೆಯನ್ನು ಮುಂದುವರಿಸದಿರಲು ಪ್ರಾಧಿಕಾರವು ನಿರ್ಧರಿಸಿತ್ತು. ಈ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿದ್ದ ಸ್ಟ್ರಾಟೆಜಿಕ್ ಸರ್ವೀಸಸ್ ಕಂಪನಿಯು, ‘ಜೂನ್ 25ರಿಂದ ಬಿಡಿಎಗೆ ನಿಮ್ಮ ಸೇವೆಯ ಅಗತ್ಯ ಇರುವುದಿಲ್ಲ’ ಎಂದು ಈ ಸಿಬ್ಬಂದಿಗೆ ಇ–ಮೇಲ್ ಕೂಡ ಕಳುಹಿಸಿತ್ತು. ಹತ್ತು– ಹದಿನೈದು ವರ್ಷಗಳಿಂದ ಬಿಡಿಎಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನೇಕ ಸಿಬ್ಬಂದಿ ಏಕಾಏಕಿ ಕೆಲ ಕಳೆದುಕೊಳ್ಳಬೇಕಾದ ಸ್ಥಿತಿ ತಲುಪಿದ್ದರು. ಕೆಲವರು ಈ ಬಗ್ಗೆ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡಿದ್ದರು.
ಕೋವಿಡ್ ಸಂದರ್ಭದಲ್ಲಿ ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ಕಿತ್ತುಹಾಕಬಾರದು ಎಂದು ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದ್ದರೂ ಬಿಡಿಎ ಈ ನಿರ್ಧಾರ ಕೈಗೊಂಡಿದ್ದರ ಬಗ್ಗೆ ‘ಪ್ರಜಾವಾಣಿ’ ಜೂನ್ 17ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಬಿಡಿಎ ಹೊರಗುತ್ತಿಗೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಪ್ರಸ್ತಾವವನ್ನು ಕೈಬಿಟ್ಟಿದೆ.
‘ಬಿಡಿಎ ಕೇಂದ್ರ ಕಚೇರಿಯಲ್ಲಿ 13 ವರ್ಷಗಳಿಂದ ದತ್ತಾಂಶ ನಮೂದಿಸುವ ಸಿಬ್ಬಂದಿಯಾಗಿ (ಡಿಇಒ) ಕಾರ್ಯನಿರ್ವಹಿಸುತ್ತಿದ್ದೆ. ಜೂನ್ 25ರಿಂದ ಕರ್ತವ್ಯಕ್ಕೆ ಹಾಜರಾಗಬೇಕಿಲ್ಲ ಎಂದು ಸ್ಟ್ರಾಟೆಜಿಕ್ ಸರ್ವೀಸಸ್ ಕಂಪನಿಯವರು ಇ– ಮೇಲ್ ಕಳುಹಿಸಿದ್ದರು. ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾದ ಬಳಿಕ ನಮ್ಮನ್ನು ಕೆಲಸದಿಂದ ತೆಗೆಯುವ ಪ್ರಸ್ತಾವ ಕೈಬಿಟ್ಟಿದ್ದಾರೆ’ ಎಂದು ಡಿಇಒ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.