ADVERTISEMENT

ಮಹಿಳೆಗೆ ಕೊರೊನಾ ಸೋಂಕು; ವಿಧಾನಸೌಧದ ಮುಂದೆ ಆಂಬ್ಯುಲೆನ್ಸ್‌ ನಿಲ್ಲಿಸಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಮೇ 2021, 11:33 IST
Last Updated 6 ಮೇ 2021, 11:33 IST
   

ಬೆಂಗಳೂರು: ಕೋವಿಡ್‌ ರೋಗಿಗೆ ಬೆಡ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ಸೋಂಕಿತ ವ್ಯಕ್ತಿಯ ಪತ್ನಿ ಮುಖ್ಯಮಂತ್ರಿ ನಿವಾಸದ ಮುಂದೆ ಧರಣಿ ಮಾಡಿದ ಬೆನ್ನಲ್ಲೇ ಸಂಜೆ ವಿಧಾನಸೌಧದ ಮುಂದೆ ಆಂಬ್ಯುಲೆನ್ಸ್‌ನಲ್ಲಿ ಸೋಂಕಿತ ಮಹಿಳೆಯನ್ನು ತಂದು ನಿಲ್ಲಿಸಿದ ಘಟನೆ ನಡೆದಿದೆ.

ಎರಡು ದಿನ ಅಲೆದಾಡಿದರೂ ಹಾಸಿಗೆ ಸಿಗಲಿಲ್ಲ. ಆದ್ದರಿಂದ ಇಲ್ಲಿ ತಂದಿದ್ದೇವೆ. ಹಾಸಿಗೆ ಕೊಡಿಸುವ ಜವಾಬ್ದಾರಿ ಸರ್ಕಾರದ್ದು ಎಂದು ಹೊಸಕೋಟೆಯ ಸೋಂಕಿತ ಮಹಿಳೆಯ ಸಂಬಂಧಿಕರು ಸುದ್ದಿಗಾರರಿಗೆ ಹೇಳಿದರು.

ಇಲ್ಲಿ ನಿಲ್ಲಿಸುವುದರಿಂದ ಪ್ರಯೋಜನ ಇಲ್ಲ, ಸೋಂಕಿತೆಗೆ ಆಸ್ಪತ್ರೆಗೆ ಒಯ್ಯಿರಿ, ಅಲ್ಲಿ ಆಮ್ಲಜನಕ ನೀಡುತ್ತಾರೆ. ಇಲ್ಲಿ ನಿಲ್ಲಿಸಿಕೊಂಡರೆ ಮಹಿಳೆಯ ಪ್ರಾಣಕ್ಕೆ ಅಪಾಯವಾಗಬಹುದು ಎಂದು ಪೊಲೀಸರು ಹೇಳಿದರು.

ADVERTISEMENT

ನಮಗೆ ಬೆಡ್‌ ಸಿಗದೇ ಜಾಗ ಖಾಲಿ ಮಾಡುವುದಿಲ್ಲ ಎಂದು ಸೋಂಕಿತ ಮಹಿಳೆಯ ಪುತ್ರಿ ಹೇಳಿದರು.

ಆ ವೇಳೆಗೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು, ಇಲ್ಲಿ ಆಂಬ್ಯುಲೆನ್ಸ್‌ ನಿಲ್ಲಿಸಿದರೆ ಸಮಸ್ಯೆ ಏನು. ಆಕ್ಸಿಜನ್‌ ಅಂಬುಲೆನ್ಸ್‌ ಬರುತ್ತಿದೆ ಅಲ್ಲಿವರೆಗೆ ಇರಲಿ ಎಂದು ವಾದಿಸಿದರು. ‘ಇಲ್ಲಿ ಇಟ್ಟುಕೊಳ್ಳುವುದಕ್ಕಿಂತ ತಕ್ಷಣ ವಿಕ್ಟೋರಿಯಾಗೆ ಕರೆದೊಯ್ಯಿರಿ’ ಎಂದು ಪೊಲೀಸ್‌ ಅಧಿಕಾರಿ ಹೇಳಿದರು.

ನೋಡಿ ನಮ್ಮನ್ನು ಇಲ್ಲಿಂದ ಸಾಗಹಾಕಲು ನೋಡುತ್ತಿದ್ದಾರೆ ಎಂದು ಆ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದರು.

ಕೆಲವೇ ನಿಮಿಷಗಳಲ್ಲಿ ಕಾಂಗ್ರೆಸ್‌ ಕೇರ್ಸ್‌ನ ಆಕ್ಸಿಜನ್‌ ಹೊಂದಿದ ಆಂಬ್ಯುಲೆನ್ಸ್‌ ಅಲ್ಲಿಗೆ ಬಂದಿತು. ಮಹಿಳೆಯನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು. ವಿಕ್ಟೋರಿಯಗೆ ಕರೆದೊಯ್ಯಲು ಪೊಲೀಸರು ಸೂಚಿಸಿದರು. ‘ವಿಕ್ಟೋರಿಯಾದಲ್ಲಿ ಹಾಸಿಗೆ ಸಿಗದೇ ಮಹಿಳೆ ಸತ್ತರೆ ಸರ್ಕಾರವೇ ಹೊಣೆ ಹೊರಬೇಕು’ ಎಂದು ರಾಜಕಾರಣಿಯ ಪೋಷಾಕಿನಲ್ಲಿದ್ದ ವ್ಯಕ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.