ಬೆಂಗಳೂರು: ಸುಡಾನ್ ದೇಶದ ಪ್ರಜೆಯನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋರಮಂಗಲದ ರಾಜೇಂದ್ರ ನಗರ ನಿವಾಸಿ ಫಿಲಿಪ್ಸ್ ಜಾರ್ಜ್, ವಿಕ್ರಂ ಪಾಂಡಿಯನ್ ಮತ್ತು ಅಜಿತ್ ಬಂಧಿತರು. ಆರೋಪಿಗಳಿಂದ ₹11 ಸಾವಿರ ನಗದು ಮತ್ತು ನಾಲ್ಕು ಮೊಬೈಲ್ ಜಪ್ತಿ ಮಾಡಲಾಗಿದೆ.
‘ಅಕ್ಟೋಬರ್ 8ರ ತಡರಾತ್ರಿ 12.40ಕ್ಕೆ ವಿದೇಶಿ ವಿದ್ಯಾರ್ಥಿ ತನ್ನ ದ್ವಿಚಕ್ರ ವಾಹನದಲ್ಲಿ ಕೋರಮಂಗಲದಿಂದ ಶೇಷಾದ್ರಿಪುರ ಕಡೆ ಬರುತ್ತಿದ್ದರು. ಮಾರ್ಗ ಮಧ್ಯೆ ಒಂದೇ ಬೈಕ್ನಲ್ಲಿ ಮೂವರು ಹೋಗುತ್ತಿದ್ದನ್ನು ಕಂಡು ರೇಗಿಸಿದ್ದ. ಅದರಿಂದ ಕೋಪಗೊಂಡ ಆರೋಪಿಗಳು, ವಿದ್ಯಾರ್ಥಿಯನ್ನು ಹಿಂಬಾಲಿಸಿ ಶೇಷಾದ್ರಿಪುರದ ರಾಜೀವ್ ಗಾಂಧಿ ಸರ್ಕಲ್ ಬಳಿ ಅಡ್ಡಗಟ್ಟಲು ಮುಂದಾಗಿದ್ದು, ಅದರಿಂದ ಗಾಬರಿಗೊಂಡು ಕೆಳಗೆ ಬಿದ್ದಿದ್ದ. ಆಗ ಆರೋಪಿಗಳು ಆತನನ್ನು ಪಕ್ಕಕ್ಕೆ ಕರೆದೊಯ್ದು ಮೊಬೈಲ್ ಕಸಿದುಕೊಂಡು, ಆತನ ಫೋನ್ಪೇ ಪಾಸ್ವರ್ಡ್ ಪಡೆದು ₹11 ಸಾವಿರ ನಗದನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಪೈಕಿ ವಿಕ್ರಂ ಪಾಂಡಿಯನ್ ವಿರುದ್ಧ ಅಶೋಕನಗರ ಠಾಣೆಯಲ್ಲಿ ಕೊಲೆ ಪ್ರಕರಣವಿದ್ದು, ಈತ ರೌಡಿಶೀಟರ್. ಅಜಿತ್ ವಿರುದ್ಧ ದರೋಡೆಗೆ ಯತ್ನ ಆರೋಪದಡಿ ಅಶೋಕನಗರದಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.