ಬೆಂಗಳೂರು: ಟ್ರ್ಯಾವೆಲ್ ಏಜೆನ್ಸಿ ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿ ನಿಂದಿಸಿದ್ದ ಆರೋಪದ ಅಡಿ ಮೂವರು ಆರೋಪಿಗಳನ್ನು ಕಲಾಸಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಗುರಪ್ಪನಪಾಳ್ಯದ ಅಜೀಜ್ಖಾನ್ (37), ನಾಗವಾರದ ತಬ್ರೇಜ್ (30) ಹಾಗೂ ಬಿದರಹಳ್ಳಿ ಬನಶಂಕರಿ ಎರಡನೇ ಹಂತದ ಇಮ್ರಾನ್ ಖಾನ್ (35) ಬಂಧಿತರು.
ರಾಯಲ್ ಟ್ರಾವೆಲ್ಸ್ ಕಂಪನಿಯ ಲೋಡಿಂಗ್ ಹಾಗೂ ಅನ್ ಲೋಡಿಂಗ್ ವಿಭಾಗದ ಉಸ್ತುವಾರಿ ಹರಿಕೃಷ್ಣ ಅವರು ನೀಡಿದ ದೂರು ಆಧರಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ದೂರುದಾರ ಹರಿಕೃಷ್ಣ ಹಾಗೂ ಬಿಹಾರದ ಸುರೇಂದ್ರ ಕುಮಾರ್ ಅವರು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಆರೋಪಿಗಳು ಬಂದಿದ್ದರು. ‘ನೀನು ಏಕೆ ಕೇಸರು ಶಾಲು ಹಾಕಿಕೊಂಡು ಕೆಲಸ ಮಾಡುತ್ತಿದ್ದೀಯಾ’ ಎಂಬುದಾಗಿ ಸುರೇಂದ್ರ ಕುಮಾರ್ ಅವರನ್ನು ಆರೋಪಿಗಳು ಪ್ರಶ್ನಿಸಿ ನಿಂದಿಸಿ ಹಲ್ಲೆ ನಡೆಸಿದ್ದರು’ ಎಂಬ ದೂರು ಆಧರಿಸಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
‘ನಾನು ಮಧ್ಯಪ್ರವೇಶಿಸಿದಾಗ, ಆರೋಪಿಗಳು ನನ್ನನ್ನು ನಿಂದಿಸಿದರು. ನನ್ನ ಅಂಗಿಯನ್ನು ಹರಿದುಹಾಕಿ ಹಲ್ಲೆ ನಡೆಸಿದರು. ಕಾರ್ಮಿಕರಿಗೆ ಕೇಸರಿ ಶಾಲು ಧರಿಸಲು ಏಕೆ ಅವಕಾಶ ನೀಡಲಾಗಿದೆ ಎಂದು ಪ್ರಶ್ನಿಸಿದರು. ಶಾಲು ತೆಗೆದುಹಾಕಿ ಹೋಗುವಂತೆ ಬೆದರಿಕೆ ಹಾಕಿದರು’ ಎಂಬುದಾಗಿ ಹರಿಕೃಷ್ಣ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೂವರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆಗಸ್ಟ್ 24ರಂದು ಕಲಾಸಿಪಾಳ್ಯ ಬಿಎಂಟಿಸಿ ಬಸ್ ನಿಲ್ದಾಣದ ಎದುರಿನ ರಾಯಲ್ ಟ್ರಾವೆಲ್ ಕಚೇರಿ ಬಳಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2) (ಸ್ವಯಂ ಪ್ರೇರಣೆಯಿಂದ ನೋವು ಉಂಟು ಮಾಡುವುದು), 302 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ನಿಂದನೆ), 352 (ಉದ್ದೇಶಪೂರ್ವಕ ಅವಮಾನ) ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.