ಬೆಂಗಳೂರು: ಬಿಬಿಎ ಎರಡನೇ ವರ್ಷದ ವಿದ್ಯಾರ್ಥಿನಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಡುಸೊಣ್ಣಪ್ಪಹಳ್ಳಿಯ ಗ್ರೀನ್ ಗಾರ್ಡನ್ ಲೇಔಟ್ನಲ್ಲಿ ನಡೆದಿದೆ.
ಸನಾ ಪರ್ವಿನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ‘ಪುತ್ರಿಯ ಸಾವಿಗೆ ಕೇರಳ ರೀಫಾಸ್ ಎಂಬಾತ ಕಾರಣನಾಗಿದ್ದು, ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಂದೆ ಅಬ್ದುಲ್ ನಜೀರ್ ಅವರು ದೂರು ನೀಡಿದ್ದಾರೆ. ಆ ದೂರು ಆಧರಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಬಾಗಲೂರು ಠಾಣೆಯ ಪೊಲೀಸರು ಹೇಳಿದರು.
ಖಾಸಗಿ ಕಾಲೇಜಿನಲ್ಲಿ ದ್ವೀತಿಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಸನಾ ಪರ್ವೀನ್, ಕಾಡುಸೊಣ್ಣಪ್ಪಹಳ್ಳಿಯ ಗ್ರೀನ್ ಗಾರ್ಡನ್ ಬಡಾವಣೆಯ ಪಿಜಿಯೊಂದರಲ್ಲಿ ಗೆಳತಿಯರೊಂದಿಗೆ ವಾಸವಾಗಿದ್ದರು.
‘ಅ.17ರಂದು ಬೆಳಿಗ್ಗೆ ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನ ಉಪನ್ಯಾಸಕಿ ಕರೆ ಮಾಡಿ ನಿಮ್ಮ ಮಗಳಿಗೆ ಸೀರಿಯಸ್ ಆಗಿದೆ ಕೂಡಲೇ ಬನ್ನಿ ಎಂದು ಕರೆ ಮಾಡಿದ್ದರು. ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಪಿಜಿಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ’ ಎಂದು ದೂರಿನಲ್ಲಿ ಅಬ್ದುಲ್ ತಿಳಿಸಿದ್ದಾರೆ.
ರೀಫಾಸ್ ಎಂಬಾತ ಬ್ಲ್ಯಾಕ್ಮೇಲ್ ಮಾಡಿ ಕಿರುಕುಳ ನೀಡುತ್ತಿದ್ದ ಎಂಬುದಾಗಿ ಹೇಳಿಕೊಂಡಿದ್ದಳು. ಕಾರಣ ತಿಳಿಸಿರಲಿಲ್ಲ. ರೀಫಾಸ್ ಹಿಂಸೆ ತಾಳಲಾರದೆ ಪರ್ವಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.