ADVERTISEMENT

ಪಾದಚಾರಿ ಮಾರ್ಗದಲ್ಲಿ ಕಲ್ಲು ಹಾಸು ಇಲ್ಲದೇ ಅವಘಡ: ಗಾಯಕ ಅಜಯ್ ವಾರಿಯರ್‌ಗೆ ಗಾಯ

​ಪ್ರಜಾವಾಣಿ ವಾರ್ತೆ
Published 12 ಮೇ 2022, 11:21 IST
Last Updated 12 ಮೇ 2022, 11:21 IST
ಅಜಯ್ ವಾರಿಯರ್‌
ಅಜಯ್ ವಾರಿಯರ್‌   

ಬೆಂಗಳೂರು: ಹಿನ್ನೆಲೆ ಗಾಯಕ ಅಜಯ್ ವಾರಿಯರ್ ಪಾದಚಾರಿ ಮಾರ್ಗದಲ್ಲಿ ಕಲ್ಲು ಹಾಸು ಮುಚ್ಚಿರದಚರಂಡಿಗೆ ಜಾರಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರಗಳನ್ನು ಹಂಚಿಕೊಂಡಿರುವ ಅವರು, ‘ಬೆಂಗಳೂರಿಗೆ ಯಾಕೆ ಈ ಸಮಸ್ಯೆಯಾಗಿದೆ. ನಾನು ಪ್ರಚಾರಕ್ಕಾಗಿ, ಈ ಘಟನೆಯ ಕುರಿತು (ಸಾಮಾಜಿಕ ಜಾಲತಾಣಗಳಲ್ಲಿ) ಪೋಸ್ಟ್ ಮಾಡಿಕೊಂಡಿಲ್ಲ. ಜನರನ್ನು ಎಚ್ಚರಿಸಲು ಪೋಸ್ಟ್‌ ಮಾಡಿದ್ದೇನೆ. ಈ ಸಮಸ್ಯೆಯನ್ನು ಸರ್ಕಾರ ಪರಿಹರಿಸಬೇಕು’ ಎಂದು ಹೇಳಿಕೊಂಡಿದ್ದಾರೆ.

‘ಸಂಬಂಧಪಟ್ಟ ಅಧಿಕಾರಿಗಳು ತೆರೆದ ಗುಂಡಿಗಳನ್ನು ಗುರುತಿಸಿ ಮುಚ್ಚಬೇಕು. ಇಲ್ಲದಿದ್ದರೆ, ಇದು ನಮ್ಮಲ್ಲಿ ಯಾರಿಗಾದರೂ, ಯಾವಾಗ ಬೇಕಾದರೂ ಸುಲಭವಾಗಿ ಸಂಭವಿಸಬಹುದು. ಆ ಎದೆಯ ಮಟ್ಟದ ನೀರನ್ನು ನೆನೆದು ಈಗಲೂ ನಡುಗುತ್ತಿದ್ದೇನೆ. ಪುಟ್ಟ ಮಗುವೊಂದು ಅದರೊಳಗೆ ಕಾಲಿಟ್ಟರೆ, ದೇವರೇ ಅದನ್ನು ಕಾಪಾಡಬೇಕು’ ಎಂದು ನೋವು ಹಂಚಿಕೊಂಡಿದ್ದಾರೆ.

ADVERTISEMENT

‘ನಾನು ಕಾನೂನು ಪಾಲಿಸುವ, ತೆರಿಗೆ ಪಾವತಿಸುವ ಬೆಂಗಳೂರಿನ ನಾಗರಿಕ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಗಮನಹರಿಸಿ ನಗರದ ನಿವಾಸಿಗಳಿಗೆ ಸುರಕ್ಷಿತ ರಸ್ತೆ ಹಾಗೂ ಫುಟ್‌ಪಾತ್‌ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು’ ಎಂದು ಅಜಯ್ ವಾರಿಯರ್ ಒತ್ತಾಯಿಸಿದ್ದಾರೆ.

ಈ ಘಟನೆಯ ಕುರಿತು ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ (ಕಲ್ಯಾಣ) ಬಿ.ಶರತ್‌, ‘ಅಜಯ್ ವಾರಿಯರ್ ಆರೋಗ್ಯವನ್ನು ಬಿಬಿಎಂಪಿ ಅಧಿಕಾರಿಗಳು ವಿಚಾರಿಸಿದ್ದಾರೆ. ಅವರು ಪ್ರಥಮ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಗತ್ಯ ನೆರವು ಒದಗಿಸಲು ಬಿಬಿಎಂಪಿ ಸಿದ್ಧವಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.