
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೊದಲ ಸಭೆಯಲ್ಲಿ ಅನುಮೋದನೆಯಾಗಿದ್ದ ಐದು ನಗರ ಪಾಲಿಕೆಗಳ ಬಜೆಟ್ ಅನ್ನು ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಿ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಆರ್.ಅಶೋಕ್, ‘ಬೆಂಗಳೂರಿಗೆ ಮತ್ತೊಂದು ಹೊಡೆತ’ ಎಂದಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ ಬರೆದುಕೊಂಡಿರುವ ಅವರು,‘ ಜಿಬಿಎ ಅನುದಾನ ಅರ್ಧದಷ್ಟು ಕಡಿತ ಮಾಡಿರುವುದು ಬೆಂಗಳೂರಿಗೆ ಮತ್ತೊಂದು ಹೊಡೆತವಾಗಿದೆ. ಸಿಎಂ, ಡಿಸಿಎಂ ಜಗಳದಲ್ಲಿ ಬೆಂಗಳೂರಿಗೆ ಮತ್ತೊಮ್ಮೆ ಅನ್ಯಾಯವಾಗಿದ್ದು, ಜಿಬಿಎ ಸಭೆಯಲ್ಲಿ ಅನುಮೋದನೆಗೊಂಡಿದ್ದ ಬಜೆಟ್ ನಲ್ಲಿ ಅರ್ಧದಷ್ಟು ಹಣವನ್ನು ನಗರಾಭಿವೃದ್ಧಿ ಇಲಾಖೆ ಕಡಿತಗೊಳಿಸಿದೆ. ಡಿಸಿಎಂ ಡಿ.ಕೆ. ಶಿವಕುಮಾರ್
ಅವರೇ, ಜಿಬಿಎ ಸಭೆಯಲ್ಲಿ ಅನುಮೋದನೆಗೊಂಡಿದ್ದ ಬಜೆಟ್ ಅನ್ನೇ ಕೊಡಿಸಲು ಕೈಲಾಗದ ತಮಗೆ ಕೇಂದ್ರ ಸರ್ಕಾರವನ್ನ ಪ್ರಶ್ನಿಸುವ ಯಾವ ನೈತಿಕತೆ ಇದೆ? ನಿಮಗೆ ನಿಜವಾಗಿಯೂ ಬೆಂಗಳೂರಿನ ಬಗ್ಗೆ ಬದ್ಧತೆ ಇದ್ದರೆ, ಪೂರ್ತಿ ಅನುದಾನವನ್ನು ಬಿಡುಗಡೆ ಮಾಡಿಸಿ’ ಎಂದು ಸವಾಲು ಹಾಕಿದ್ದಾರೆ. 
ಅಕ್ಟೋಬರ್ 10ರಂದು ನಡೆದ ಜಿಬಿಎ ಸಭೆಯಲ್ಲಿ, ಬಿಬಿಎಂಪಿಯಾಗಿದ್ದಾಗ 2025–26ನೇ ಸಾಲಿಗೆ ಮಂಡಿಸಲಾಗಿದ್ದ ₹20,440.33 ಕೋಟಿ ಬಜೆಟ್ ಅನ್ನು, ಐದು ನಗರ ಪಾಲಿಕೆಗಳಿಗೆ ವಿಭಜನೆ ಮಾಡಿದ್ದ ಬಜೆಟ್ಗೆ ಅನುಮೋದನೆ ದೊರೆತಿತ್ತು. ಒಟ್ಟಾರೆ ಬಜೆಟ್ ಗಾತ್ರ ₹7,972.66 ಕೋಟಿ ಯಷ್ಟಾಗಿತ್ತು. ಇದನ್ನು ₹6,001 ಕೋಟಿಗೆ ಕಡಿತಗೊಳಿಸಿ, ಯಾವುದಕ್ಕೆ ಎಷ್ಟು ವೆಚ್ಚ ಮಾಡಬೇಕು ಎಂಬುದನ್ನು ‘ಬಜೆಟ್ ಕೋಡ್’ ನೀಡಿ ವೆಚ್ಚಗಳನ್ನು ಮರುವಿಂಗಡಿಸಲಾಗಿದೆ. ಈ ಬಗ್ಗೆ ‘ಪ್ರಜಾವಾಣಿ’ ‘ಪಾಲಿಕೆಗಳ ಬಜೆಟ್ ಅರ್ಧದಷ್ಟು ಕಡಿತ’ ಎನ್ನುವ ವರದಿ ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.