
ಬೆಂಗಳೂರು: ‘ಕೆರೆಗಳ ನಗರವೆಂದು ಪ್ರಸಿದ್ಧವಾಗಿರುವ ಬೆಂಗಳೂರು ಮಹಾನಗರ ಜಲಕ್ಷಾಮದ ಗಂಭೀರ ಸವಾಲನ್ನು ಎದುರಿಸುತ್ತಿದೆ. ಆದ್ದರಿಂದ ಸಮರ್ಪಕ ಜಲಮೂಲಗಳ ನಿರ್ವಹಣೆಯತ್ತ ತುರ್ತು ಕ್ರಿಯಾ ಯೋಜನೆ ರೂಪಿಸಬೇಕು’ ಎಂದು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಬಿ. ರಮೇಶ್ ತಿಳಿಸಿದರು.
ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಡಬ್ಲ್ಯುಡಬ್ಲ್ಯು ಇಂಟರ್ನ್ಯಾಷನಲ್, ಜೆಡ್ಡಬ್ಲ್ಯುಎಸ್ಐ ಸೋಮವಾರ ಆಯೋಜಿಸಿದ್ದ ಜಲ, ಇಂಧನ, ಪರಿಸರ ಮತ್ತು ಆರೋಗ್ಯ ಸಂರಕ್ಷಣೆಗೆ ಸಂಬಂಧಿಸಿದ ‘ವೀಹ್ ಟೆಕ್’ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭವಿಷ್ಯದ ಹಿತದೃಷ್ಟಿಯಿಂದ ಬೆಂಗಳೂರು ನಗರದ ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ನೀರು ಕೇವಲ ಒಂದು ಸಂಪನ್ಮೂಲವಾಗಿರದೆ ಜೀವನ ಮತ್ತು ಜೀವನೋಪಾಯದ ಸಾಧನವೂ ಆಗಿದೆ. ಅದರ ಮಹತ್ವವನ್ನು ಕಡೆಗಣಿಸಿ ದುರ್ಬಳಕೆಯ ಮೂಲಕ ಅತ್ಯಂತ ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸಲಾಗಿದೆ’ ಎಂದರು.
‘ಸುರಕ್ಷಿತ ಇಂಧನ ಪೂರೈಕೆ, ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಆರೋಗ್ಯ ಸಂರಕ್ಷಣೆ ಮಾಡುವುದರಲ್ಲಿ ಸರ್ಕಾರ ಮತ್ತು ಸಾರ್ವಜನಿಕ ಸಂಸ್ಥೆಗಳ ಪ್ರಮುಖ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾಲಯ ಸಕ್ರಿಯವಾಗಿ ಕೈಜೋಡಿಸಲು ಸಿದ್ಧವಿದೆ’ ಎಂದು ಹೇಳಿದರು.
ಸಮ್ಮೇಳನದ ತಾಂತ್ರಿಕ ಅಧ್ಯಕ್ಷ ಮಾಜಿ ಶಾಸಕ ಎ. ನಾರಾಯಣಸ್ವಾಮಿ ಮಾತನಾಡಿ, ‘ಜಲ, ಇಂಧನ ಭದ್ರತೆ ಹಾಗೂ ಹವಾಮಾನ ಬದಲಾವಣೆ ಸಮಸ್ಯೆಗಳು ಇಡೀ ಜಗತ್ತನ್ನು ಕಾಡುತ್ತಿವೆ. ಪ್ರಾಕೃತಿಕ ಸಂಪನ್ಮೂಲಗಳ ದುರ್ಬಳಕೆ ಹಾಗೂ ಪರಿಸರ ಮಾಲಿನ್ಯದಿಂದಾಗಿ ಜನರ ಆರೋಗ್ಯಕ್ಕೂ ಕುತ್ತು ಬಂದಿದೆ. ಹೀಗಾಗಿ ಮಾನವ ಕುಲದ ಉಳಿವಿಗಾಗಿ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕಿದೆ’ ಎಂದರು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷ ಟಿ.ಜಿ. ಸೀತಾರಾಮ್, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಬಿ.ಆರ್. ಸುಪ್ರೀತ್, ವಿಶ್ವವಿದ್ಯಾನಿಲಯದ ಕುಲಸಚಿವರಾದ (ಮೌಲ್ಯಮಾಪನ) ರಮೇಶ್ ಕುಡೇನಟ್ಟಿ, ಪರಿಸರ ತಜ್ಞರಾದ ರಾಂಪುರ್ ವಿಶ್ವನಾಥ್, ವೀಹ್ ಟೆಕ್ ಸಂಘಟಕರಾದ ಇನಾಯತುಲ್ಲಾಹ, ಪವನ್ ಕುಮಾರ್ ಮತ್ತು ಯೋಗಿಂಧರ್ ಪೂಲಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.