ಬೆಂಗಳೂರು: ಸ್ಯಾಂಕಿ ಕೆರೆ ಬಳಿಯ ಶಿವಾಜಿ ಪ್ರತಿಮೆಗೆ ಮಸಿ ಬಳಿದು ಬಂಧನಕ್ಕೊಳಪಟ್ಟಿರುವ 7 ಮಂದಿ ಆರೋಪಿಗಳು ಕೃತ್ಯ ಎಸಗಲು ನಾಲ್ಕು ದಿನಗಳ ಹಿಂದೆಯೇ ತಯಾರಿ ಆರಂಭಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಇದೇ 13 ಮತ್ತು 14ರಂದು ಸ್ಯಾಂಕಿ ಕೆರೆಗೆ ಬಂದಿದ್ದ ಆರೋಪಿಗಳು ಸ್ಥಳ ಪರಿಶೀಲಿಸಿದ್ದರು. ಮೂರನೇ ದಿನವೂ ಸ್ಥಳಕ್ಕೆ ಬಂದಿದ್ದರು. ಆಗ ಪ್ರತಿಮೆ ಬಳಿ ಗಸ್ತಿನಲ್ಲಿದ್ದ ಪೊಲೀಸರು ಅವರನ್ನು ಹಿಂದಕ್ಕೆ ಕಳುಹಿಸಿದ್ದರು. ಶಿವಾಜಿ ಪ್ರತಿಮೆ ಎತ್ತರವಾಗಿರುವುದನ್ನು ಗಮನಿಸಿದ್ದ ಆರೋಪಿಗಳು, ಅದನ್ನು ಏರಲು ಅಗತ್ಯವಿರುವ ಎತ್ತರದ ಏಣಿಯೊಂದನ್ನು ಯಾರೂ ಇಲ್ಲದ ಹೊತ್ತಿನಲ್ಲಿ ಸ್ಥಳಕ್ಕೆ ತಂದು ಅಲ್ಲೇ ಇಟ್ಟು ಹೋಗಿದ್ದರು’ ಎಂದು ಮೂಲಗಳು ವಿವರಿಸಿವೆ.
‘ಪೂರ್ವ ನಿಗದಿಯಂತೆ ಡಿ.16ರ ಮಧ್ಯರಾತ್ರಿ ಕಾರು, ಎರಡು ಆಟೊ ಹಾಗೂ ಬೈಕಿನಲ್ಲಿ ಸ್ಥಳಕ್ಕೆ ಬಂದಿದ್ದ ಕರ್ನಾಟಕ ರಣಧೀರ ಪಡೆಯ ಕಾರ್ಯಕರ್ತರು ಪ್ರತಿಮೆ ಮೇಲೆ ಮಸಿ ಸುರಿದು ಪರಾರಿಯಾಗಿದ್ದರು. ಆರೋಪಿ ನವೀನ್ ಈ ದೃಶ್ಯವನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದ. ಆರೋಪಿಗಳು ಕೃತ್ಯಕ್ಕೆ
ಬಳಸಿದ್ದ ವಸ್ತುಗಳು ಹಾಗೂ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.