ADVERTISEMENT

ಬೆಂಗಳೂರು: ಚರ್ಚ್‌ಗಳಲ್ಲಿ ಸಾರ್ವಜನಿಕ ಬಲಿಪೂಜೆ ರದ್ದು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 15:23 IST
Last Updated 8 ಏಪ್ರಿಲ್ 2021, 15:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ಕಾರಣದಿಂದಾಗಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ಚರ್ಚ್‌, ಪ್ರಾರ್ಥನಾಲಯ ಹಾಗೂ ಸಂಸ್ಥೆಗಳಲ್ಲಿ ಇದೇ 20ರವರೆಗೂ ಸಾರ್ವಜನಿಕ ಬಲಿಪೂಜೆ ಹಾಗೂ ಪ್ರಾರ್ಥನಾ ವಿಧಿಗಳನ್ನು ರದ್ದು ಮಾಡಲಾಗಿದೆ.

‘ಕೋವಿಡ್‌ ಎರಡನೇ ಅಲೆ ತೀವ್ರಗೊಳ್ಳುತ್ತಿದೆ. ಇದರ ನಿಯಂತ್ರಣಕ್ಕಾಗಿ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದನ್ನು ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹೀಗಾಗಿ ಇದೇ 20ರವರೆಗೂ ಸಾರ್ವಜನಿಕ ಬಲಿಪೂಜೆ ಹಾಗೂ ಪ್ರಾರ್ಥನಾ ವಿಧಿಗಳನ್ನು ರದ್ದು ಮಾಡಲಾಗಿದೆ. ಭಕ್ತರ ವೈಯಕ್ತಿಕ ಭೇಟಿ ಹಾಗೂ ಪ್ರಾರ್ಥನೆಗೆ ಚರ್ಚ್‌ ಹಾಗೂ ಪ್ರಾರ್ಥನಾಲಯಗಳನ್ನು ತೆರೆಯಬಹುದು. ಗುರುಗಳು ಆಯ್ದ ಕೆಲ ಭಕ್ತರ ಜೊತೆ ಅಥವಾ ಒಬ್ಬರೇ ಪ್ರಾರ್ಥನೆ ಸಲ್ಲಿಸಬಹುದು. ಈ ವೇಳೆ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಬೆಂಗಳೂರಿನ ಮಹಾಧರ್ಮಾಧ್ಯಕ್ಷ ಪೀಟರ್‌ ಮಚಾದೊ ತಿಳಿಸಿದ್ದಾರೆ.

‘ಈಗಾಗಲೇ ನಿಗದಿಯಾಗಿರುವ ಮದುವೆ, ದೀಕ್ಷಾಸ್ನಾನ ಹಾಗೂ ಪ್ರಥಮ ಪರಮಪ್ರಸಾದ ಸೇರಿದಂತೆ ಇನ್ನಿತರ ಆಚರಣೆಗೆ ಯಾವುದೇ ಅಡ್ಡಿಯಿಲ್ಲ. ಈ ಕಾರ್ಯಕ್ರಮಗಳಲ್ಲಿ 50ಕ್ಕಿಂತ ಹೆಚ್ಚು ಜನ ಸೇರದಂತೆ ಎಚ್ಚರ ವಹಿಸಬೇಕು. ಸಾಧ್ಯವಾದರೆ ಒಳಾಂಗಣಗಳಲ್ಲಿ ಇವುಗಳನ್ನು ಆಚರಿಸಲು ಆದ್ಯತೆ ನೀಡಬೇಕು. ದೇವಸ್ಥಾನಗಳಲ್ಲಿ ಬಲಿಪೂಜೆ ನಿಷೇಧಿಸಿರುವುದರಿಂದ ಮೃತರ ಸಮಾಧಿ ಸ್ಥಳದಲ್ಲಿ ಇದನ್ನು ನಡೆಸಬಹುದು’ ಎಂದು ಹೇಳಿದ್ದಾರೆ.

ADVERTISEMENT

‘ಹೋದ ವರ್ಷ ಲಾಕ್‌ಡೌನ್‌ ಸಮಯದಲ್ಲಿ ಪ್ರತಿದಿನದ ಹಾಗೂ ಭಾನುವಾರದ ಬಲಿಪೂಜೆ, ದೈವಾರಾಧನೆಯ ವಿಧಿ ಮತ್ತು ಪ್ರಾರ್ಥನೆಗಳನ್ನು ವಿವಿಧ ಭಾಷೆಗಳಲ್ಲಿ ಮಹಾಧರ್ಮಕ್ಷೇತ್ರದ ಅಧಿಕೃತ ಯೂಟ್ಯೂಬ್‌, ಫೇಸ್‌ಬುಕ್‌ ಹಾಗೂ ಇತರ ಸಾಮಾಜಿಕ ಜಾಲತಾಣಗಳ ಮೂಲಕ ನೇರ ಪ್ರಸಾರ ಮಾಡಲಾಗಿತ್ತು. ಈ ವ್ಯವಸ್ಥೆ ಈಗಲೂ ಮುಂದುವರಿಯಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.