ADVERTISEMENT

‘ನಮ್ಮ ಫಿಟ್ನೆಸ್‌ ಟ್ರಾಯಲ್‌’ಗೆ ವಿರೋಧ

ಕಬ್ಬನ್ ಪಾರ್ಕ್‌ನಲ್ಲಿ ಸ್ಥಾಪನೆಗೆ ಸ್ವಿಸ್‌ ಕಾನ್ಸುಲೇಟ್‌ನಿಂದ ಸಭೆ l ವಾಯುವಿಹಾರಿಗಳ ತೀವ್ರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 19:59 IST
Last Updated 3 ಜುಲೈ 2022, 19:59 IST
ಕಬ್ಬನ್ ಪಾರ್ಕ್‌ನಲ್ಲಿ ’ಫಿಟ್ನೆಸ್‌ ಟ್ರಾಯಲ್‌’ ಅಳವಡಿಸುವ ಕುರಿತು ನಡೆದ ಸಭೆಯಲ್ಲಿ ತೋಟಗಾರಿಕೆ ಇಲಾಖೆ ಮತ್ತು ಸ್ವಿಸ್ ಕಾನ್ಸುಲೇಟ್‌ ಅಧಿಕಾರಿಗಳು ಮತ್ತು ಕಬ್ಬನ್‌ ಪಾರ್ಕ್‌ನ ವಾಯು ವಿಹಾರಿಗಳು ಪಾಲ್ಗೊಂಡಿದ್ದರು
ಕಬ್ಬನ್ ಪಾರ್ಕ್‌ನಲ್ಲಿ ’ಫಿಟ್ನೆಸ್‌ ಟ್ರಾಯಲ್‌’ ಅಳವಡಿಸುವ ಕುರಿತು ನಡೆದ ಸಭೆಯಲ್ಲಿ ತೋಟಗಾರಿಕೆ ಇಲಾಖೆ ಮತ್ತು ಸ್ವಿಸ್ ಕಾನ್ಸುಲೇಟ್‌ ಅಧಿಕಾರಿಗಳು ಮತ್ತು ಕಬ್ಬನ್‌ ಪಾರ್ಕ್‌ನ ವಾಯು ವಿಹಾರಿಗಳು ಪಾಲ್ಗೊಂಡಿದ್ದರು   

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಕಬ್ಬನ್‌ ಪಾರ್ಕ್‌ನಲ್ಲಿ ಆರಂಭಿಸಲು ಉದ್ದೇಶಿಸಲಾಗಿದ್ದ ‘ನಮ್ಮ ಫಿಟ್ನೆಸ್‌ ಟ್ರಾಯಲ್‌’ ವ್ಯಾಯಾಮ ಕೇಂದ್ರಕ್ಕೆ ವಾಯು ವಿಹಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಕಬ್ಬನ್‌ ಪಾರ್ಕ್‌ ಆವರಣದಲ್ಲಿ ಸ್ವಿಸ್‌ ಕಾನ್ಸುಲೇಟ್‌ನವರ ‘ನಮ್ಮ ಫಿಟ್ನೆಸ್‌ಟ್ರಾಯಲ್‌’ ವ್ಯಾಯಾಮ ಕೇಂದ್ರಗಳನ್ನು ಅಳವಡಿಸುವ ಕುರಿತು ಭಾನುವಾರ ಸಭೆ ನಡೆಯಿತು. ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸ್ವಿಸ್‌ ಕಾನ್ಸುಲೇಟ್‌ ಪ್ರತಿನಿಧಿಗಳು ಮತ್ತು ವಾಯು ವಿಹಾರಿಗಳು
ಭಾಗವಹಿಸಿದ್ದರು.

ಮೂರು ತಿಂಗಳ ಹಿಂದೆ ಸ್ವಿಟ್ಜರ್‌ಲೆಂಡ್‌ನಿಂದ ‘ಫಿಟ್ನೆಸ್‌ ಟ್ರಾಯಲ್‌’ ಬಗ್ಗೆ ಪ್ರಸ್ತಾವಬಂದಿತ್ತು. ಇಲಾಖೆಯಿಂದ ಅನುಮತಿ ನೀಡಿರಲಿಲ್ಲ. ಮುಖ್ಯ ಕಾರ್ಯದರ್ಶಿ ಅವರ ಆದೇಶದ ಮೇರೆಗೆ ಸಾರ್ವಜನಿಕ ಅಭಿಪ್ರಾಯ ಪಡೆದುಕೊಳ್ಳಲಾಯಿತು. ಇದನ್ನು ಬೇರೆ ಯಾವುದಾದರೂ ಉದ್ಯಾನಕ್ಕೆ ಸ್ಥಳಾಂತರಿಸಿ ಎನ್ನುವುದುವಾಯು ವಿಹಾರಿಗಳ ಒತ್ತಾಯವಾಗಿದೆ ಎಂದು ಕಬ್ಬನ್‌ ಉದ್ಯಾನದ ಉಪನಿರ್ದೇಶಕ ಎಚ್.ಟಿ. ಬಾಲಕೃಷ್ಣ ಮಾಹಿತಿ ನೀಡಿದರು.

ADVERTISEMENT

ಸ್ವಿಸ್ ಕಾನ್ಸಲೇಟ್‌ನ ಪ್ರತಿನಿಧಿ ಪ್ರಜ್ವಲಾ ಮಾತನಾಡಿ, ‘ವಿಟಾ ಪಾರ್‌ಕೋರ್ಸ್‌ ಫೌಂಡೇಷನ್‌ ವತಿಯಿಂದ 4 ಕಿ.ಮೀ ವ್ಯಾಪ್ತಿಯಲ್ಲಿ 12 ರಿಂದ 14 ನಮ್ಮ ಫಿಟ್ನೆಸ್‌ ಟ್ರಾಯಲ್‌ಗಳನ್ನು ಸ್ಥಾಪಿಸಲಾಗುತ್ತದೆ. ನಾಗರಿಕರಿಗೆ ಉಚಿತ ಕ್ರೀಡಾ, ವ್ಯಾಯಾಮ ಚಟು ವಟಿಕೆಗಳಿಗೆ ಉತ್ತೇಜಿಸುವುದು, ಆರೋಗ್ಯ ಜಾಗೃತಿ ಮೂಡಿಸುವುದು ಉದ್ದೇಶವಾಗಿದೆ. ಇದು ಸಂಪೂರ್ಣ ಪರಿಸರ ಸ್ನೇಹಿ’ ಎಂದು ತಿಳಿಸಿದರು.

’ವೀ ಲವ್‌ ಕಬ್ಬನ್‌ ಪಾರ್ಕ್‌’ ಸದಸ್ಯೆ ಸುನೀತಾ ಮಾತನಾಡಿ, ’ಈ ಪರಿಕಲ್ಪನೆ ಸಂಪೂರ್ಣವಾಗಿ ವಾಣಿಜ್ಯ ಉದ್ದೇಶದಿಂದ ಕೂಡಿದೆ. ಕಬ್ಬನ್‌ ಪಾರ್ಕ್‌ ವಾತಾವರಣದಲ್ಲಿ ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಇವತ್ತು ಸ್ವಿಸ್‌ ದೇಶದವರು ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಜರ್ಮನಿ, ಇಂಗ್ಲೆಂಡ್‌, ಚೀನಾದವರು ಕಬ್ಬನ್ ಪಾರ್ಕ್‌ಗೆ ಲಗ್ಗೆ ಇಡುತ್ತಾರೆ. ಆದ್ದರಿಂದ ಇಲ್ಲಿ ಖಾಸಗಿ ಕಂಪನಿಯವರಿಗೆ ಅವಕಾಶ ನೀಡಬಾರದು’ ಎಂದು ಆಗ್ರಹಿಸಿದರು.

’ಕಬ್ಬನ್‌ ಪಾರ್ಕ್‌ನಲ್ಲಿ ನಮ್ಮ ಫಿಟ್ನೆಸ್‌ ಟ್ರಾಯಲ್‌ ಕೇಂದ್ರಗಳನ್ನು ಅಳವಡಿಸಲು ಸರ್ಕಾರ ಮತ್ತು ತೋಟಗಾರಿಕೆ ಇಲಾಖೆ ಆದೇಶ ನೀಡಿದರೆ ಹೋರಾಟ ಮಾಡಲಾಗುವುದು’ ಎಂದು ಕಬ್ಬನ್‌ ಪಾರ್ಕ್‌ ವಾಯು ವಿಹಾರಿಗಳ ಸಂಘದ ಅಧ್ಯಕ್ಷ ಎಸ್.ಉಮೇಶ ಎಚ್ಚರಿಕೆ ನೀಡಿದರು.

ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.