
ಬೆಂಗಳೂರು: ಸಂಜಯನಗರದ ಲೊಟ್ಟೆಗೊಲ್ಲಹಳ್ಳಿಯ ಮನೆಯಲ್ಲಿ ಡಿಪ್ಲೊಮಾ ವಿದ್ಯಾರ್ಥಿ ಹೇಮಂತ್ (22) ಅವರು ಶುಕ್ರವಾರ ರಾತ್ರಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಸದ ಬಸವರಾಜ ಬೊಮ್ಮಾಯಿ ಅವರ ಆಪ್ತ ಕಾರ್ಯದರ್ಶಿ ಚಂದ್ರು ಅವರ ಪುತ್ರ ಹೇಮಂತ್.
‘ಹೇಮಂತ್ ಅವರು ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಅಂತಿಮ ವರ್ಷದ ಡಿಪ್ಲೊಮಾ ಓದುತ್ತಿದ್ದರು. ಕುಟುಂಬದವರ ಜತೆಗೆ ಶನಿವಾರ ಹೇಮಂತ್ ಅವರೂ ತಿರುಪತಿಗೆ ತೆರಳಲು, ಸಿದ್ಧತೆ ನಡೆಸಿದ್ದರು. ಶನಿವಾರ ಮುಂಜಾನೆ ಶವವಾಗಿ ಪತ್ತೆ ಆಗಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ತಾಯಿ ಜತೆಗೆ ಗಲಾಟೆ: ‘ತಿರುಪತಿಗೆ ಹೊರಟಿದ್ದರಿಂದ ಹೇಮಂತ್ ತಾಯಿ ಮಗಳಿಗೆ ಆಭರಣ ಕೊಡಿಸಿದ್ದರು. ಈ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆದಿತ್ತು. ‘ತಂಗಿಗೆ ಕೇಳಿದ್ದೆಲ್ಲಾ ಕೊಡಿಸುತ್ತೀರಿ. ನನಗೇನೂ ಕೊಡಿಸಲ್ಲ’ ಎಂದು ಕೋಪದಲ್ಲಿ ಕೋಣೆಗೆ ಹೋಗಿದ್ದ ಹೇಮಂತ್ ಅವರು ಬಾಗಿಲು ಹಾಕಿಕೊಂಡಿದ್ದನು. ರಾತ್ರಿ ಊಟಕ್ಕೂ ಕರೆದರೂ ಕೋಣೆಯಿಂದ ಹೊರಗೆ ಬಂದಿರಲಿಲ್ಲ. ನಿದ್ರೆ ಮಾಡುತ್ತಿರಬಹುದು ಅಥವಾ ಮೊಬೈಲ್ನಲ್ಲಿ ಸ್ನೇಹಿತರ ಜತೆಗೆ ಮಾತನಾಡುತ್ತಿರಬಹುದು ಎಂದು ಕುಟುಂಬಸ್ಥರು ಭಾವಿಸಿದ್ದರು. ಶನಿವಾರ ಮುಂಜಾನೆ ಬಾಗಿಲು ಒಡೆದು ಪರಿಶೀಲಿಸಿದಾಗ ನೇಣು ಹಾಕಿಕೊಂಡಿರುವುದು ಪತ್ತೆ ಆಗಿತ್ತು’ ಎಂದು ಮೂಲಗಳು ಹೇಳಿವೆ.
‘ಎಲ್ಲರ ಜತೆಗೂ ಹೇಮಂತ್ ಚೆನ್ನಾಗಿಯೇ ಇದ್ದ. ಯಾರ ಬಳಿ ಸಹ ಏನೂ ಹೇಳಿಕೊಂಡಿರಲಿಲ್ಲ. ತಂದೆ–ತಾಯಿಯೂ ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಯಾವ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಿಲ್ಲ’ ಎಂದು ಮೃತ ಹೇಮಂತ್ ಅಜ್ಜ ಮರಿಯಪ್ಪ ತಿಳಿಸಿದರು.
ಸ್ಥಳಕ್ಕೆ ಸಂಜಯನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.