
ಬೆಂಗಳೂರು: ವೈದ್ಯೆಗೆ ಪ್ರಜ್ಞೆ ತಪ್ಪಿಸಿ, ಅವರ ಕುತ್ತಿಗೆ ಹಾಗೂ ಮನೆಯಲ್ಲಿದ್ದ ಆಭರಣ ದೋಚಿ ಪರಾರಿಯಾಗಿರುವ ನೇಪಾಳದ ದಂಪತಿಗಾಗಿ ಬ್ಯಾಡರಹಳ್ಳಿ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಭರತ್ನಗರದಲ್ಲಿ ನೆಲಸಿರುವ ಸ್ತ್ರೀರೋಗ ತಜ್ಞೆ ಲಲಿತಾ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಒಟ್ಟು 55 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ ಎಂದು ದೂರು ನೀಡಲಾಗಿದೆ.
‘ನೇಪಾಳದ ದಂಪತಿ ತಿಂಗಳ ಹಿಂದಷ್ಟೇ ಮನೆಗೆಲಸಕ್ಕೆ ಸೇರಿಕೊಂಡಿದ್ದರು. ಮನೆಯ ನೆಲಮಹಡಿಯಲ್ಲಿ ನೆಲಸಿದ್ದರು. ಲಲಿತಾ ಅವರ ಪತಿಯೂ ವೈದ್ಯರಾಗಿದ್ದಾರೆ. ಪುತ್ರ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ವೈದ್ಯ ದಂಪತಿಯ ಮನೆಯಲ್ಲಿ ಅಧಿಕ ಹಣ ಹಾಗೂ ಆಭರಣ ಇರುವ ಮಾಹಿತಿಯನ್ನು ಆರೋಪಿಗಳು ತಿಳಿದುಕೊಂಡಿದ್ದರು. ಡಿ.2ರಂದು ಲಲಿತಾ ಅವರ ಪುತ್ರ ಅನಾರೋಗ್ಯದಿಂದ ಬೇಗನೆ ಮಲಗಿದ್ದರು. ಅದೇ ಸರಿಯಾದ ಸಮಯವೆಂದು ಆಲೋಚಿಸಿ, ಅಂದು ರಾತ್ರಿ ವೈದ್ಯೆಗೆ ಊಟದಲ್ಲಿ ಔಷಧ ಬೆರೆಸಿ ಕೊಟ್ಟಿದ್ದರು. ಊಟ ಸೇವಿಸಿದ ವೈದ್ಯೆ ಕೆಲವೇ ನಿಮಿಷದಲ್ಲಿ ಪ್ರಜ್ಞೆ ತಪ್ಪಿದ್ದರು. ಅದಾದ ಮೇಲೆ ಲಲಿತಾ ಅವರ ಮೈ ಮೇಲಿದ್ದ 40 ಗ್ರಾಂ ಸರ ಹಾಗೂ 15 ಗ್ರಾಂನ ತೂಕದ ಎರಡು ಬಳೆಗಳು, ಮೊಬೈಲ್ ಮತ್ತು ಹಣ ದೋಚಿಕೊಂಡು ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.
ಮರು ದಿನ ಬೆಳಿಗ್ಗೆ ಪುತ್ರ ತನ್ನ ಕೊಠಡಿಯಿಂದ ಎದ್ದು ತಾಯಿ ಕೊಠಡಿಗೆ ಹೋಗಿ ನೋಡಿದಾಗ ಚಿನ್ನ ಹಾಗೂ ನಗದು ದೋಚಿ ಪರಾರಿ ಆಗಿರುವುದು ಗೊತ್ತಾಗಿತ್ತು ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.