ಬೆಂಗಳೂರು: ಸರ್ಕಾರಿ ಗುರುತಿನ ಚೀಟಿ, ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ಗಳನ್ನು ಮಾರ್ಪಡಿಸಿ ಕೊಡುತ್ತಿದ್ದ ಇಬ್ಬರು ಆರೋಪಿಗಳನ್ನು ಹೆಬ್ಬಗೋಡು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯರಂಡನಹಳ್ಳಿಯ ನಿವಾಸಿ ಜಿ.ಎಂ.ಯಶವಂತ್ (19) ಹಾಗೂ ಆನೇಕಲ್ ತಾಲ್ಲೂಕಿನ ಬೇಗಹಳ್ಳಿಯ ಜಿ.ರಘುವೀರ್ (25) ಬಂಧಿತರು.
ಬಂಧಿತರಿಂದ ಕಂಪ್ಯೂಟರ್, ಪ್ರಿಂಟರ್, ಲ್ಯಾಮಿನೇಷನ್, ಹಾರ್ಡ್ ಡಿಸ್ಕ್, ಎರಡು ಮೊಬೈಲ್ ಫೋನ್ಗಳು ಹಾಗೂ ₹2 ಸಾವಿರ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಯಶವಂತ್ ಪಿಯುಸಿ ಓದಿದ್ದ. ಜಿ.ರಘುವೀರ್ ಐಟಿಐ ಕಲಿತಿದ್ದ. ಆರೋಪಿಗಳಿಬ್ಬರೂ ಠಾಣಾ ವ್ಯಾಪ್ತಿಯಲ್ಲಿ ಸೈಬರ್ ಕೆಫೆ ನಡೆಸುತ್ತಿದ್ದರು. ಸೈಬರ್ ಕೆಫೆಗೆ ಬಂದವರಿಗೆ ದಾಖಲೆಗಳನ್ನು ಮಾರ್ಪಾಡು ಮಾಡಿಕೊಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಓಯೊನಲ್ಲಿ ಕೊಠಡಿ ಬೇಕಿದ್ದವರು ಸೈಬರ್ ಕೆಫೆಗೆ ಬಂದು ಆಧಾರ್ ಕಾರ್ಡ್ ಮಾರ್ಪಾಡು ಮಾಡಿಸಿಕೊಂಡು ಹೋಗುತ್ತಿದ್ದರು. ಖಾಸಗಿ ಕಂಪನಿಗಳಲ್ಲಿ ಕೆಲಸದ ಹುಡುಕಾಟ ನಡೆಸುತ್ತಿದ್ದವರಿಗೆ ಅಂಕಪಟ್ಟಿಯಲ್ಲಿ ಅಂಕಗಳನ್ನು ಮಾರ್ಪಾಡು ಮಾಡಿಕೊಡುತ್ತಿದ್ದರು. ಈ ರೀತಿ ನೂರಾರು ದಾಖಲೆಗಳನ್ನು ಆರೋಪಿಗಳು ಮಾರ್ಪಾಡು ಮಾಡಿಕೊಟ್ಟಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಒಂದು ದಾಖಲೆ ಪ್ರತಿಯನ್ನು ಮಾರ್ಪಾಡು ಮಾಡಲು ₹ 5 ಸಾವಿರದಿಂದ ₹10 ಸಾವಿರ ಪಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.