ADVERTISEMENT

ಬೆಂಗಳೂರಿನಲ್ಲಿ ಕೃತ್ಯ: ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ

ಬೆಂಗಳೂರಿನಲ್ಲಿ ಕೃತ್ಯ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 19:54 IST
Last Updated 31 ಮಾರ್ಚ್ 2023, 19:54 IST
   

ಬೆಂಗಳೂರು: ಸ್ನೇಹಿತನ ಜೊತೆ ಉದ್ಯಾನದಲ್ಲಿ ಕುಳಿತಿದ್ದ ಯುವತಿಯನ್ನು ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಸಂಬಂಧ ನಾಲ್ವರು ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬಂಧಿತರನ್ನು ಸತೀಶ್, ವಿಜಯ್, ಶ್ರೀಧರ್ ಹಾಗೂ ಕಿರಣ್ ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಕಚೇರಿಯೊಂದರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಕಾಲ್ ಸೆಂಟರ್ ಉದ್ಯೋಗಿ. ಮತ್ತೊಬ್ಬ ಎಲೆಕ್ಟ್ರಿಷಿಯನ್ ಆಗಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಾ. 4ರಂದು ನಡೆದಿರುವ ಕೃತ್ಯದ ಸಂಬಂಧ ಯುವತಿ ದೂರು ನೀಡಿದ್ದಾರೆ. ಅದರನ್ವಯ ಆರೋಪಿಗಳನ್ನು ಬಂಧಿಸಲಾಗಿದೆ. ನಾಲ್ವರ ಹಿನ್ನೆಲೆ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ತಿಳಿಸಿವೆ. ಸ್ನೇಹಿತನನ್ನು ಹೆದರಿಸಿ ಯುವತಿ ಅಪಹರಣ: ‘ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 19 ವರ್ಷದ ಯುವತಿಯು ಸ್ನೇಹಿತನ ಜತೆ ರಾತ್ರಿ 10 ಗಂಟೆ ಸುಮಾರಿಗೆ ನ್ಯಾಷನಲ್ ಗೇಮ್ಸ್ ಉದ್ಯಾನಕ್ಕೆ ಹೋಗಿ ಕುಳಿತಿದ್ದರು. ಅದನ್ನು ನೋಡಿದ್ದ ಆರೋಪಿಯೊಬ್ಬ ಸ್ಥಳಕ್ಕೆ ಹೋಗಿದ್ದ. ‘ರಾತ್ರಿ ಹೊತ್ತು ಏಕೆ ಕುಳಿತಿದ್ದೀರಾ’ ಎಂಬುದಾಗಿ ಹೆದರಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಭಯಗೊಂಡಿದ್ದ ಸ್ನೇಹಿತ ಸ್ಥಳದಿಂದ ಹೊರಟುಹೋಗಿದ್ದ. ಯುವತಿ ಸ್ಥಳ ದಲ್ಲೇ ಕುಳಿತಿದ್ದರು. ತನ್ನ ಮೂವರು ಸ್ನೇಹಿತರನ್ನು ಸ್ಥಳಕ್ಕೆ ಕರೆಸಿದ್ದ ಆರೋಪಿ, ಯುವತಿಯನ್ನು ಎಳೆದೊಯ್ದು ಕಾರು ಹತ್ತಿಸಿದ್ದ.’

‘ದೊಮ್ಮಲೂರು, ಇಂದಿರಾನಗರ, ಆನೇಕಲ್, ನೈಸ್ ರಸ್ತೆ ಹಾಗೂ ಇತರೆಡೆ ಕಾರಿನಲ್ಲಿ ಯುವತಿಯನ್ನು ಸುತ್ತಾಡಿಸಲಾಗಿತ್ತು. ಚಲಿಸುತ್ತಿದ್ದ ಕಾರಿನಲ್ಲೇ ನಾಲ್ವರು ಆರೋಪಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಮಾರ್ಚ್ 25ರಂದು ನಸುಕಿನ 4 ಗಂಟೆ ಸುಮಾರಿಗೆ ಯುವತಿಯನ್ನು ಅವರ ಮನೆ ಬಳಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು’ ಎಂದು ತಿಳಿಸಿವೆ.

‘ಕೃತ್ಯದಿಂದ ತೀವ್ರ ಅಸ್ವಸ್ಥಗೊಂಡಿದ್ದ ಯುವತಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಮಾರ್ಚ್ 26ರಂದು ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಹೇಳಿವೆ.

ಗಸ್ತು ತಿರುಗದ ಪೊಲೀಸರು: ಆರೋಪ

‘ಕೋರಮಂಗಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಹೆಚ್ಚು ಗಸ್ತು ತಿರುಗುತ್ತಿಲ್ಲ. ಇದರಿಂದಾಗಿ ಮೇಲಿಂದ ಮೇಲೆ ಅಪರಾಧಗಳು ಸಂಭವಿಸುತ್ತಿವೆ’ ಎಂದು ಸ್ಥಳೀಯರು ದೂರಿದರು.

‘ಉದ್ಯಾನ, ಸಾರ್ವಜನಿಕ ಸ್ಥಳ ಹಾಗೂ ಇತರೆಡೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗುತ್ತಿದೆ. ದೂರು ನೀಡಿದ ದಿನವಷ್ಟೇ ಪೊಲೀಸರು ಗಸ್ತು ತಿರುಗುತ್ತಾರೆ. ನಂತರ, ಮೌನ
ವಾಗುತ್ತಾರೆ. ಪೊಲೀಸರ ಈ ವರ್ತನೆಯು ಅಪರಾಧಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಸ್ಥಳೀಯರು ಭಯದಲ್ಲಿ ವಾಸಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.