ಸಾವು
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಶ್ರೀರಾಮ ಕಾಲೊನಿಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟಗೊಂಡ ಘಟನೆಯಲ್ಲಿ ಗಾಯಗೊಂಡಿದ್ದ 9 ಮಂದಿಯ ಪೈಕಿ ಸೋಮವಾರ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ. ಇದರಿಂದಾಗಿ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಕಸ್ತೂರಮ್ಮ (35) ಮತ್ತು ಅವರ ಪುತ್ರಿ ಕಯಾಲ್ (8) ಮೃತಪಟ್ಟವರು.
ಆಗಸ್ಟ್ 15ರಂದು ಕಸ್ತೂರಮ್ಮ ಅವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿತ್ತು. 13 ಮನೆಗಳು ಕುಸಿದಿದ್ದವು. ಕಸ್ತೂರಮ್ಮ ಅವರ ಪಕ್ಕದ ಮನೆಯಲ್ಲಿದ್ದ ಬಾಲಕ ಮುಬಾರಕ್ ಅಂದೇ ಮೃತಪಟ್ಟಿದ್ದ.
ಸ್ಫೋಟ ಸಂಭವಿಸಿದ ವೇಳೆ ಮನೆಯೊಳಗಿದ್ದ ಕಸ್ತೂರಮ್ಮ ಮತ್ತು ಕಯಾಲ್ ಅವರಿಗೆ ಶೇ 30ರಷ್ಟು ಸುಟ್ಟ ಗಾಯಗಳಾಗಿದ್ದವು. ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಸ್ತೂರಮ್ಮ ಅವರು ಮನೆಗೆಲಸ ಮಾಡುತ್ತಿದ್ದರು. ಬಾಲಕಿ ಕಯಾಲ್, ಮೂರನೇ ತರಗತಿ ಓದುತ್ತಿದ್ದಳು ಎಂದು ಪೊಲೀಸರು ಹೇಳಿದರು.
ಘಟನೆಯಲ್ಲಿ ಕಸ್ತೂರಮ್ಮ ಅವರ ಅಕ್ಕಪಕ್ಕದ ಮನೆಯ ಏಳು ಮಂದಿ ಗಾಯಗೊಂಡಿದ್ದು, ಅವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಉಳಿದ ಆರು ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸರಸಮ್ಮ ಎಂಬುವವರ ಕೈ ಮುರಿದಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.