
ವಂಚನೆ
ಬೆಂಗಳೂರು: ಆಡುಗೋಡಿ ಠಾಣೆ ವ್ಯಾಪ್ತಿಯ ಪೇಯಿಂಗ್ ಗೆಸ್ಟ್ನಲ್ಲಿ (ಪಿ.ಜಿ) ವಾಸವಾಗಿದ್ದ ಯುವತಿಗೆ ಭವಿಷ್ಯ ಹೇಳುವ ನೆಪದಲ್ಲಿ ₹2.05 ಲಕ್ಷ ವಂಚಿಸಿರುವ ಘಟನೆ ನಡೆದಿದೆ.
21 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಚಂದ್ರಶೇಖರ್ ಸುಗತ್ ಗುರೂಜಿ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ‘ಕಷ್ಟಕ್ಕೆ ಪರಿಹಾರ’ ಎಂಬ ಜಾಹೀರಾತು ಗಮನಿಸಿದ ಯುವತಿ, ತನಗೆ ಮದುವೆ ಆಗುತ್ತದೆಯೇ ಎಂಬ ಬಗ್ಗೆ ವಿಚಾರಿಸಿದ್ದಾರೆ. ಅದಕ್ಕೆ ಹಣ ಖರ್ಚಾಗುತ್ತದೆ ಎಂದು ಗುರೂಜಿ ಹೇಳಿದ್ದಾರೆ. ಗುರೂಜಿ ನೀಡಿದ ನಂಬರ್ಗೆ ಆನ್ಲೈನ್ ಮೂಲಕ ಹಂತ ಹಂತವಾಗಿ ₹2.05 ಲಕ್ಷ ವರ್ಗಾವಣೆ ಮಾಡಿದ್ದಾರೆ. ನಂತರ ಮತ್ತೆ ₹4 ಲಕ್ಷ ಕೇಳಿದಾಗ ಯುವತಿಗೆ ಅನುಮಾನ ಬಂದಿದೆ.
‘ಮದುವೆ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರಿಂದ ಹಣ ವಾಪಸ್ ಕೇಳಿದೆ. ಹಣ ನೀಡುವುದಿಲ್ಲ ಎಂದು ಗುರೂಜಿ ಬೆದರಿಕೆ ಹಾಕಿದ್ದಾರೆ’ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಣ ವರ್ಗಾವಣೆ, ಮಾತುಕತೆ ಎಲ್ಲವೂ ಆನ್ಲೈನ್ ಮೂಲಕ ನಡೆದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.