ಬೆಂಗಳೂರು: ‘ರಾಜ್ಯ ಸರ್ಕಾರ ‘ಎ’ ಖಾತಾ ‘ಬಿ’ ಖಾತಾ ಎಂದು ರಾಜಧಾನಿಯ ಜನರನ್ನು ವಂಚಿಸುತ್ತಿದೆ’ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಆರೋಪಿಸಿದರು.
ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಿದ ಅವರು, ‘ತಕ್ಷಣವೇ ಖಾತಾ ವಂಚನೆಯನ್ನು ನಿಲ್ಲಿಸಬೇಕು. ಬಿ ಖಾತಾದಿಂದ ಎ ಖಾತಾ ಮಾಡುವ ಕ್ರಮಕ್ಕೆ ಕಾನೂನಿನಲ್ಲಿಯೇ ಅವಕಾಶ ಇಲ್ಲ. ಕೇವಲ ಜನರ ಹಣ ಲೂಟಿ ಮಾಡಲಿಕ್ಕಾಗಿಯೇ ಇದನ್ನು ಮಾಡಲಾಗುತ್ತಿದೆ. ಜನರಿಗೆ ಮಂಕುಬೂದಿ ಎರಚಿ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡುವ ಹುನ್ನಾರ ನಡೆಸಲಾಗಿದೆ’ ಎಂದು ದೂರಿದರು.
‘ಖಾತಾ ಬದಲಾವಣೆ ಎನ್ನುವುದೇ ದೊಡ್ಡ ಬೋಗಸ್. ನ್ಯಾಯಾಲಯದಲ್ಲಿ ಈ ಸರ್ಕಾರ ಛೀಮಾರಿ ಹಾಕಿಸಿಕೊಳ್ಳುವುದು ಖಚಿತ. ಈ ಹಿಂದೆ ಒಂದು ಚದರ ಮೀಟರಿಗೆ ₹13,800 ತೆರಿಗೆಯನ್ನು ಬಿಬಿಎಂಪಿಯಿಂದ ವಿಧಿಸಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಇದನ್ನು ₹3 ಲಕ್ಷದಿಂದ ₹6 ಲಕ್ಷದವರೆಗೆ ಹೆಚ್ಚಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.