
ಬೆಂಗಳೂರು: ನೌಕಾಪಡೆಯ ನಿವೃತ್ತ ಕ್ಯಾಪ್ಟನ್ ನವೀನ್ಚಂದ್ರ ಭಟ್ (60) ಹಾಗೂ ದಂತ ವೈದ್ಯೆ ಶ್ಯಾಮಲಾ ಭಟ್(55) ಕೊಲೆ ಪ್ರಕರಣದ ಆರೋಪಿ ರೋಹನ್ಚಂದ್ರ ಭಟ್ (33) ಅವರನ್ನು ಬಂಧಿಸಿ, ಕಸ್ಟಡಿಗೆ ಪಡೆದುಕೊಂಡಿರುವ ಎಚ್ಎಎಲ್ ಠಾಣೆಯ ಪೊಲೀಸರು, ಆರೋಪಿಯ ವಿಚಾರಣೆ ತೀವ್ರಗೊಳಿಸಿದ್ದಾರೆ.
ನವೀನ್ ಚಂದ್ರ ಭಟ್ ಹಾಗೂ ಶ್ಯಾಮಲಾ ಭಟ್ ದಂಪತಿಯ ಪುತ್ರ ರೋಹನ್ಚಂದ್ರ ಭಟ್. ಪೋಷಕರ ಜತೆಗೆ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್ಮೆಂಟ್ನ ವಿಲ್ಲಾ ಸಂಖ್ಯೆ 112ರಲ್ಲಿ ವಾಸವಿದ್ದರು. ಆರು ವರ್ಷಗಳ ಹಿಂದೆ ನೌಕಾಪಡೆಯಿಂದ ನಿವೃತ್ತರಾಗಿದ್ದ ನವೀನ್ ಭಟ್ ಅವರು, ವಿಲ್ಲಾ ಖರೀದಿಸಿ ನೆಲಸಿದ್ದರು. ಪುತ್ರಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊಲೆಯಾದ ದಂಪತಿ ಮಂಗಳೂರಿನವರು. ಕೆಲವು ವರ್ಷಗಳಿಂದ ನಗರದಲ್ಲಿ ನೆಲಸಿದ್ದರು.
‘ಅಮೆರಿಕದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದ ರೋಹನ್ ಚಂದ್ರ ಭಟ್ ಅವರು ನಗರದ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲವು ವರ್ಷ ಕೆಲಸ ಮಾಡಿದ್ದರು. ಕೆಲವು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ಹೊಸ ಯೋಜನೆ ಆರಂಭಿಸಲು ನಿರ್ಧರಿಸಿದ್ದರು. ಹೊಸ ಯೋಜನೆ ಆರಂಭಿಸಲು ₹4 ಲಕ್ಷ ಬೇಕೆಂದು ಪೋಷಕರ ಬಳಿ ಕೇಳಿದ್ದರು’ ಎಂದು ಪೊಲೀಸರು ಹೇಳಿದರು.
‘ಕೆಲಸ ಬಿಟ್ಟು ಸುಮ್ಮನೆ ಓಡಾಟ ನಡೆಸುತ್ತಿದ್ದೀಯಾ? ಸಹೋದರಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾಳೆ. ನಿನಗೆ ಸ್ವಲ್ಪವೂ ಜವಾಬ್ದಾರಿ ಇಲ್ಲ. ಹೊಸ ಯೋಜನೆಗೆ ಆರ್ಥಿಕ ನೆರವು ಕೊಡುವುದಿಲ್ಲ’ ಎಂದು ಪೋಷಕರು ಹೇಳಿದ್ದರು. ಅದರಿಂದ ಸಿಟ್ಟಾಗಿದ್ದ ರೋಹನ್, ಪೋಷಕರ ಜತೆಗೆ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದರು. ಬುಧವಾರ ಬೆಳಿಗ್ಗೆ ನಡೆದ ಗಲಾಟೆಯು ವಿಕೋಪಕ್ಕೆ ಹೋಗಿ, ಪೋಷಕರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
ಮನೆ ತೊರೆದಿದ್ದ ರೋಹನ್: ‘ಪೋಷಕರ ಜತೆಗೆ ಗಲಾಟೆ ನಡೆದ ಬಳಿಕ ರೋಹನ್ ಪ್ರತ್ಯೇಕ ಬಾಡಿಗೆ ಮನೆ ಪಡೆದು ನೆಲಸಿದ್ದರು. ಹದಿನೈದು ದಿನಗಳ ಹಿಂದೆ ಬಾಡಿಗೆ ಮನೆ ಬಿಟ್ಟು ವಿಲ್ಲಾಕ್ಕೆ ಬಂದು ಪೋಷಕರ ಜತೆಗೆ ನೆಲಸಿದ್ದರು’ ಎಂದು ಪೊಲೀಸರು ಹೇಳಿದರು.
ಕೊಲೆಯಾದ ದಂಪತಿಯ ಪುತ್ರಿ ಅಮೆರಿಕದಲ್ಲಿದ್ದು, ಅವರು ನಗರಕ್ಕೆ ಬಂದ ಮೇಲೆ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರಿಸಲಾಗುವುದು. ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳನ್ನು ಇಡಲಾಗಿದೆ ಎಂದು ಪೊಲೀಸರು ಹೇಳಿದರು.
ವಿಚಾರಣೆ ವೇಳೆ ವಿಚಿತ್ರ ವರ್ತನೆ: ರೋಹನ್ ಭಟ್ ಅವರು ವಿಚಾರಣೆ ವೇಳೆ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ. ಗೊಂದಲಕಾರಿ ಹೇಳಿಕೆಗಳನ್ನೂ ನೀಡುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.
‘ಅಮ್ಮ ನನಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಡುತ್ತಿದ್ದರು. ಕೆಲಸಕ್ಕೆ ಹೋಗದ ಕಾರಣ ಪದೇ ಪದೇ ತಂದೆ ನಿಂದನೆ ಮಾಡುತ್ತಿದ್ದರು. ನೀನು ನಮ್ಮ ಕುಟುಂಬದ ಮರ್ಯಾದೆ ಕಳೆಯುವುದಕ್ಕೇ ಹುಟ್ಟಿದ್ದೀಯಾ ಎಂದು ಹೀಯಾಳಿಸುತ್ತಿದ್ದರು. ಅವರ ಮಾತಿನಿಂದ ನೋವಾಗಿತ್ತು’ ಎಂಬುದಾಗಿ ವಿಚಾರಣೆ ವೇಳೆ ಆರೋಪಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು. ‘ವಿಲ್ಲಾಕ್ಕೆ ಬರುತ್ತಿದ್ದ ಕೆಲಸದವರ ಮುಂದೆಯೂ ನನಗೆ ಬೈದು ಅವಮಾನ ಮಾಡುತ್ತಿದ್ದರು. ಹಣ ಕೇಳಿದಾಗಲೆಲ್ಲಾ ಜಗಳ ತೆಗೆಯುತ್ತಿದ್ದರು ಎಂಬುದಾಗಿ ರೋಹನ್ ಹೇಳಿಕೆ ನೀಡಿದ್ದಾನೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.