
ಕೃಷ್ಣ ಬೈರೇಗೌಡ
ಬೆಂಗಳೂರು: ‘ಎರಡು ವರ್ಷಗಳಲ್ಲಿ ಪಿಲ್ಲರ್ ನಿರ್ಮಿಸಲು ಸಾಧ್ಯವಾಗಿಲ್ಲ. ಎರಡು ತಿಂಗಳಲ್ಲಿ ಮ್ಯಾಜಿಕ್ ಮಾಡ್ತೀರಾ?’
ನಮ್ಮ ಮೆಟ್ರೊ ನಾಗವಾರ ನಿಲ್ದಾಣದಿಂದ ಬಾಗಲೂರು ಕ್ರಾಸ್ ನಿಲ್ದಾಣದವರೆಗಿನ ಎರಡನೇ ಹಂತದ ಕಾಮಗಾರಿಯನ್ನು ಭಾನುವಾರ ಪರಿಶೀಲಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮೆಟ್ರೊ ಅಧಿಕಾರಿಗಳನ್ನು ಮತ್ತು ಎನ್ಸಿಸಿ ಗುತ್ತಿಗೆ ಕಂಪನಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.
‘ನನಗೆ ಪಿಲ್ಲರ್ ಕಾಣಿಸುತ್ತಿಲ್ಲ. ನಾನೇನು ಕುರುಡ ಅಂದುಕೊಂಡ್ರಾ? ಒಂದು ಪಿಲ್ಲರ್ ನಿರ್ಮಿಸಲು ಎರಡು ವರ್ಷ ಬೇಕಾ’ ಎಂದು ಪ್ರಶ್ನಿಸಿದರು.
ಮೆಟ್ರೊ ಕಾಮಗಾರಿಯ ತ್ಯಾಜ್ಯವನ್ನು ಪಾದಚಾರಿ ರಸ್ತೆ ಮೇಲೆ ಹಾಕಿರುವುದನ್ನು ಗಮನಿಸಿದ ಸಚಿವರು ಸಿಡಿಮಿಡಿಗೊಂಡರು. ಕೂಡಲೇ ತ್ಯಾಜ್ಯವನ್ನು ತೆರವುಗೊಳಿಸುವಂತೆ ಸೂಚಿಸಿದರು.
ಸಿಬ್ಚಂದಿಯನ್ನು ಕರೆಸಿ ಸಚಿವರ ಎದುರೇ ಅಧಿಕಾರಿಗಳು ತ್ಯಾಜ್ಯವನ್ನು ತೆರವುಗೊಳಿಸಿದರು.
‘ಎಲ್ಲೋ ನಿರ್ಮಾಣ ಕಾರ್ಯ ನಡೆಯುತ್ತಿದ್ದರೆ ಇನ್ನೆಲ್ಲೋ ಯಾಕೆ ರಸ್ತೆ ಬಂದ್ ಮಾಡ್ತೀರಿ. ಜನರಿಗೆ ತೊಂದರೆ ಕೊಡ್ತೀರಿ? ಪಾದಚಾರಿ ರಸ್ತೆಯೂ ಇಲ್ಲ. ವಾಹನ ಸಂಚಾರಕ್ಕೂ ತೊಡಕು. ಯಾಕೆ ಹೀಗೆ ಮಾಡ್ತೀರಿ? ಕೂಡಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಿ’ ಎಂದು ಸೂಚಿಸಿದರು.
ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.
ನಾಗವಾರ, ವೀರಣ್ಣಪಾಳ್ಯ, ಹೆಬ್ಬಾಳ, ಎಸ್ಟೀಮ್ ಮಾಲ್ ಜಂಕ್ಷನ್, ಅಲ್ಲಾಳಸಂದ್ರ, ಜಕ್ಕೂರು ವಾಯುನೆಲೆ ಪ್ರದೇಶ, ಬ್ಯಾಟರಾಯನಪುರ, ಕೊಡಿಗೆಹಳ್ಳಿಯಲ್ಲಿ ಮೆಟ್ರೊ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
ಬೆಂಗಳೂರು ಉತ್ತರ ಪಾಲಿಕೆ ಆಯುಕ್ತ ಸುನೀಲ್ ಕುಮಾರ್, ಮೆಟ್ರೊ ಮುಖ್ಯ ಎಂಜಿನಿಯರ್, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಹಾಗೂ ಬೆಸ್ಕಾಂ ಅಧಿಕಾರಿಗಳು ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.