ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಮೊಬೈಲ್ ಫೋನ್ ಕಳ್ಳತನ ಮಾಡುತ್ತಿದ್ದ ಹಾಗೂ ಕದ್ದ ಮೊಬೈಲ್ ಖರೀದಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಗೋವಿಂದರಾಜನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಾರು ಮೆಕ್ಯಾನಿಕ್ಗಳಾದ ಗೋರಿಪಾಳ್ಯದ ಪರ್ವೇಜ್ ಖಾನ್ (29), ಜುಬೇರ್ ಉದ್ದೀನ್ ಹಾಗೂ ಕದ್ದ ಮೊಬೈಲ್ ಖರೀದಿಸುತ್ತಿದ್ದ ಸದ್ದಾಂ ಹುಸೇನ್ (30), ಅಮ್ಜದ್ ಪಾಷಾ (34) ಬಂಧಿತರು.
ಬಂಧಿತರಿಂದ ₹18 ಲಕ್ಷ ಮೌಲ್ಯದ 120 ಮೊಬೈಲ್ ಫೋನ್ಗಳು, ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ದೂರುದಾರರು ವಿನಾಯಕ ಸ್ಟಡಿ ಸೆಂಟರ್ವೊಂದರಿಂದ ರೂಂಗೆ ತಲುಪಲು ಪಿ.ಎಫ್ ಲೇಔಟ್ನ ಬಿಬಿಎಂಪಿ ಕಚೇರಿಯ ಬಳಿ ನಡೆದುಕೊಂಡು ಹೋಗುತ್ತಿದ್ದರು. ಆಗ ಬೈಕ್ನಲ್ಲಿ ಬಂದಿದ್ದ ಆರೋಪಿಗಳು, ಮೊಬೈಲ್ ಕಸಿದುಕೊಂಡು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.
ನಗರದ ಗೋರಿಪಾಳ್ಯ ಹಾಗೂ ಕೆಂಗೇರಿ ಬಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಹೊರ ರಾಜ್ಯದ ಆರೋಪಿ ಸೆರೆ: ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ಕೆ.ಜಿ. ಹಳ್ಳಿಯ ನಿವಾಸಿ ಇಸ್ರಾರ್ ಎಂಬ ಆರೋಪಿಯನ್ನು ಕೆ.ಆರ್.ಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ ₹34 ಸಾವಿರ ನಗದು ಹಾಗೂ ₹70 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ವಿರುದ್ಧ 17 ಪ್ರಕರಣಗಳು ದಾಖಲಾಗಿವೆ. ಕಳವು ಮಾಡಿದ್ದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಮಾರಾಟ ಮಾಡಿದ್ದ ಶಿವಾಜಿನಗರ, ಕೆ.ಜಿ. ಹಳ್ಳಿ, ಎಚ್ಬಿಆರ್ ಲೇಔಟ್ ಮತ್ತು ಡಿಜೆ ಹಳ್ಳಿಯ ಕೆಲವು ಜ್ಯೂವೆಲರಿ ಅಂಗಡಿಗಳಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.