
ಬೆಂಗಳೂರು: ನಗರದ ಹಲವೆಡೆ ಕಾರ್ಯಾಚರಣೆ ನಡೆಸಿದ ಅಮೃತಹಳ್ಳಿ ಹಾಗೂ ತಲಘಟ್ಟಪುರ ಠಾಣೆ ಪೊಲೀಸರು, ರಾಜ್ಯ ಹಾಗೂ ಹೊರ ರಾಜ್ಯದ 12 ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿ ₹4.60 ಕೋಟಿ ಮೌಲ್ಯದ ವಿವಿಧ ಮಾದರಿಯ ಸಿಂಥೆಟಿಕ್ ಹಾಗೂ ನೈಸರ್ಗಿಕ ಗಾಂಜಾ ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.
ಅಮೃತಹಳ್ಳಿ ಠಾಣೆಯ ಪೊಲೀಸರ ಕಾರ್ಯಾಚರಣೆ ನಡೆಸಿ, ಯಲಹಂಕದ ಕೋಗಿಲು ಲೇಔಟ್ನ ನಿವಾಸಿ, ಏರೊನಾಟಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಕುಶಾಲ್ಗೌಡ (23), ನವದೆಹಲಿಯ ಲಕ್ಷ್ಮೀನಗರದ ನಿವಾಸಿ, ಎಲ್.ಎಲ್.ಬಿ ವಿದ್ಯಾರ್ಥಿ ಶಶಾಂಕ್(22), ರಾಮನಗರ ಜಿಲ್ಲೆಯ ಚಿಕ್ಕಪಿಳ್ಳಪ್ಪ ನಿವಾಸಿ, ಬೌನ್ಸರ್ ಕೆಲಸ ಮಾಡುತ್ತಿದ್ದ ಸಾಗರ್ (29) ಹಾಗೂ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ವಿವೇಕನಗರದ ನಿವಾಸಿ, ಕಾರು ಚಾಲಕ ಎಸ್.ವಿಲ್ಸನ್ (48), ಅದೇ ರಾಜ್ಯದ ನಿವಾಸಿ, ಕಾರು ಚಾಲಕ ಆಶಿರ್ ಅಲಿ (36), ಲಾರಿ ಚಾಲಕ ರಿಯಾಸ್ (35), ಅಡುಗೆಭಟ್ಟ ಸಜಾದ್ (34), ಕಾರು ಚಾಲಕ ಕೆ.ಪಿ.ಶಿಹಾಬ್ (30) ಕೇರಳದ ಮಲ್ಲಪುರಂ ನಿವಾಸಿ, ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ನಾಸೀರ್ (28), ಕೇರಳದ ವಡಗೇರ ನಿವಾಸಿ ಅಭಿನವ್ ಡಿ. ನಂಬಿಯಾರ್ (21) ಬಂಧಿತ ಆರೋಪಿಗಳು. ಬೆಂಗಳೂರಿನ ಬೇರೆ ಬೇರೆ ಕಡೆಗಳಲ್ಲಿ ಆರೋಪಿಗಳು ನೆಲಸಿದ್ದು ಡ್ರಗ್ಸ್ ಪೆಡ್ಲಿಂಗ್ನಲ್ಲಿ ತೊಡಗಿದ್ದರು.
ಬಂಧಿತರಿಂದ ₹4 ಕೋಟಿ ಮೌಲ್ಯದ 3 ಕೆ.ಜಿ ಹೈಡ್ರೊ ಗಾಂಜಾ, 50 ಗ್ರಾಂ ಎಂಡಿಎಂಎ ಕ್ರಿಸ್ಟಲ್, 500 ಗ್ರಾಂ ಚರಸ್, 500 ಎಲ್.ಎಸ್.ಡಿ ಸ್ಟ್ರಿಪ್ಸ್, 10 ಕೆ.ಜಿ ನೈಸರ್ಗಿಕ ಗಾಂಜಾ, ಎರಡು ಕಾರು, 14 ಮೊಬೈಲ್ ಫೋನ್ಗಳು, ₹36 ಸಾವಿರ ನಗದು ಜಪ್ತಿ ಮಾಡಲಾಗಿದೆ ಎಂದು ನಗರದ ಪೊಲೀಸ್ ಕಮಿಷನರ್ ಸೀಮಾಂತ್ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.
ಖಚಿತ ಮಾಹಿತಿ ಆಧರಿಸಿ, ಜಕ್ಕೂರು ರೈಲ್ವೆ ಟ್ರ್ಯಾಕ್, ಕನಕಪುರ ರಸ್ತೆಯ ಕಗ್ಗಲಿಪುರದ ಬಳಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಹೆಚ್ಚಿನ ವಿಚಾರಣೆಗೆ ಬಂಧಿತರನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಎಲ್ಲರೂ ಸ್ನೇಹಿತರು ಎಂಬುದು ಗೊತ್ತಾಗಿದೆ. ಥಾಯ್ಲೆಂಡ್, ದುಬೈ ಹಾಗೂ ಹೊರ ರಾಜ್ಯದಿಂದ ಬಂಧಿತರು ಕಡಿಮೆ ಬೆಲೆಗೆ ಹೈಡ್ರೊ ಗಾಂಜಾ, ಎಂಡಿಎಂಎ ಕ್ರಿಸ್ಟಲ್, ಚರಸ್, ಎಲ್ಎಸ್ಟಿ ಸ್ಟ್ರಿಪ್ಸ್ ಹಾಗೂ ನೈಸರ್ಗಿಕ ಗಾಂಜಾ ಖರೀದಿಸಿ ಬೆಂಗಳೂರಿನಲ್ಲಿ ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದರು.
78 ಕೆ.ಜಿ ಡ್ರಗ್ಸ್ ಜಪ್ತಿ: ತಲಘಟ್ಟಪುರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಮಂಡ್ಯ ತಾಲ್ಲೂಕಿನ ಬಸರಾಳು ಗ್ರಾಮದ ಬಿ.ಡಿ.ಧನುಷ್ (27) ಹಾಗೂ ಬೆಂಗಳೂರಿನ ಜ್ಞಾನಭಾರತಿ ಬಳಿಯ ಉಲ್ಲಾಳ ರಸ್ತೆಯ ಐದನೇ ಬ್ಲಾಕ್ನ ನಿವಾಸಿ, ಸ್ಯಾರಿ ಡೈಯಿಂಗ್ ಕೆಲಸಗಾರ ಆರ್.ರಾಘವೇಂದ್ರ (30) ಬಂಧಿತರು. ಬಂಧಿತರಿಂದ ₹60 ಲಕ್ಷ ಮೌಲ್ಯದ 78 ಕೆ.ಜಿ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಬನಶಂಕರಿ ಆರನೇ ಹಂತದ ಕರಿಯನಪಾಳ್ಯದ ಖಾಲಿ ಪ್ರದೇಶದಲ್ಲಿ ಆರೋಪಿಗಳು ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ಮೂಲಗಳು ಹೇಳಿವೆ.
ಬೇಗೂರು
ಕೋರಮಂಗಲ
ಬನ್ನೇರುಘಟ್ಟ
ಎಲೆಕ್ಟ್ರಾನಿಕ್ ಸಿಟಿ
ಎಚ್ಎಸ್ಆರ್ ಲೇಔಟ್
ಬೊಮ್ಮನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.