ಬೆಂಗಳೂರು: ಜೀವನಪೂರ್ತಿಸಂಸಾರದ ನಿರ್ವಹಣೆ, ಮಕ್ಕಳ ಪಾಲನೆ ಮಾಡಿ ತಮ್ಮ ಕೊನೆ ದಿನಗಳಲ್ಲಿ ಕಷ್ಟಕ್ಕೆ ಸಿಲುಕಿರುವ ಹಿರಿಯ ಜೀವಗಳಿಗೆ ನೆರವಾಗಲು ನಗರದ ಪೊಲೀಸರು ‘ನಮ್ಮ ಹಿರಿಯರು’ ಕಾರ್ಯಕ್ರಮ ರೂಪಿಸಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಲಾಕ್ಡೌನ್ ಮಾಡಿದಾಗಿನಿಂದ ಹಿರಿಯ ನಾಗರಿಕರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಔಷಧಿ ಪೂರೈಕೆ, ವೈದ್ಯಕೀಯ ಸೇವೆ ದೊರೆಯಲು ಪೊಲೀಸರು ಶ್ರಮಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಹೊಯ್ಸಳ ವಾಹನವನ್ನೂ ಮೀಸಲಿಟ್ಟಿದ್ದಾರೆ. ಇದೀಗ, ‘ನಮ್ಮ ಹಿರಿಯರು’ ಕಾರ್ಯಕ್ರಮ ರೂಪಿಸಿ ಹಿರಿಯ ಜೀವಗಳ ಸಮಸ್ಯೆ ಆಲಿಸಲು ವೇದಿಕೆ ಕಲ್ಪಿಸಿದ್ದಾರೆ.
ಕಮಿಷನರ್ ಭಾಸ್ಕರ್ ರಾವ್ ಮಾರ್ಗದರ್ಶನದಲ್ಲಿ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸೆಫೆಟ್ ಮುತುವರ್ಜಿ ವಹಿಸಿ ಈ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ತಮ್ಮ ವಿಭಾಗ ವ್ಯಾಪ್ತಿಯ ಜಯನಗರ, ಜೆ.ಪಿ.ನಗರ, ಬನಶಂಕರಿ, ಗಿರಿನಗರ, ಕುಮಾರಸ್ವಾಮಿ ಲೇಔಟ್ ಹಾಗೂ ಬಸವನಗುಡಿ ಮಹಿಳಾ ಠಾಣೆ ಇನ್ಸ್ಪೆಕ್ಟರ್ಗಳನ್ನೇ ಕಾರ್ಯಕ್ರಮದ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿದ್ದಾರೆ.
‘ಸಮಾಜದಲ್ಲಿರುವ ಹಿರಿಯ ನಾಗರಿಕರಿಗೆ ಸುರಕ್ಷತೆ ಮತ್ತು ಭದ್ರತೆಯ ಭರವಸೆ’ ಎಂಬ ಘೋಷವಾಕ್ಯದಡಿ ಡಿಸಿಪಿ ಕಚೇರಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆನ್ಲೈನ್ ಮೂಲಕವೇ ಹಿರಿಯ ನಾಗರಿಕರು ಸಮಸ್ಯೆ ಹೇಳಿಕೊಂಡರು. ಭಾಸ್ಕರ್ ರಾವ್ ಹಾಗೂ ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೆಂದು ಮುಖರ್ಜಿ ಸಮಸ್ಯೆ ಈಡೇರಿಸುವ ಭರವಸೆ ನೀಡಿದರು.
ಮರುದಿನದಿಂದಲೇ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಹಿರಿಯ ನಾಗರಿಕರು ಪೊಲೀಸರಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ.
ವಿಸ್ತರಣೆಗೆ ಪ್ರಸ್ತಾವ: ‘ದಕ್ಷಿಣ ವಿಭಾಗ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಇದನ್ನು ನಗರ ಹಾಗೂ ರಾಜ್ಯದಾದ್ಯಂತ ವಿಸ್ತರಿಸಲು ಕಮಿಷನರ್ ಅವರಿಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಡಿಸಿಪಿ ರೋಹಿಣಿ ಸೆಫೆಟ್ ‘ಪ್ರಜಾವಾಣಿ’ಗೆ ತಿಳಿಸಿದರು.
'ಸುರಕ್ಷತೆ ಹಾಗೂ ಭದ್ರತೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿದ್ದರೂ ಹಿರಿಯ ನಾಗರಿಕರು ಕರೆ ಮಾಡಿ ಅಥವಾ ವಾಟ್ಸ್ಆ್ಯಪ್ ಮೂಲಕ ತಿಳಿಸಬಹುದು.ನಮ್ಮ ವಿಭಾಗವಷ್ಟೇ ಅಲ್ಲದೆ ಬೇರೆ ವಿಭಾಗದಿಂದಲೂ ಕರೆಗಳು ಬರುತ್ತಿದ್ದು, ಆ ಬಗ್ಗೆ ಆಯಾ ಡಿಸಿಪಿಗಳಿಗೆ ಮಾಹಿತಿ ನೀಡಲಾಗುತ್ತಿದೆ’ ಎಂದೂ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.