ADVERTISEMENT

ಬೆಂಗಳೂರು | ಹೊಸ ವರ್ಷಾಚರಣೆ: ಭದ್ರತೆಗೆ 11 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ

ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಡ್ರೋನ್ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2024, 19:02 IST
Last Updated 28 ಡಿಸೆಂಬರ್ 2024, 19:02 IST
<div class="paragraphs"><p>ಹೊಸ ವರ್ಷಾಚರಣೆ ಪ್ರಯುಕ್ತ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಬ್ರಿಗೇಡ್ ರಸ್ತೆಯಲ್ಲಿ ತಪಾಸಣೆ ನಡೆಸಿದರು</p></div>

ಹೊಸ ವರ್ಷಾಚರಣೆ ಪ್ರಯುಕ್ತ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಬ್ರಿಗೇಡ್ ರಸ್ತೆಯಲ್ಲಿ ತಪಾಸಣೆ ನಡೆಸಿದರು

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಭದ್ರತೆಗಾಗಿ 11,830 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದ್ದಾರೆ.

ADVERTISEMENT

ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ‌ ಪೊಲೀಸ್ ಕಮಿಷನರ್, 15 ಡಿಸಿಪಿಗಳು, 44 ಎಸಿಪಿಗಳು, 135 ಇನ್​ಸ್ಪೆಕ್ಟರ್‌ಗಳು, 530 ಸಬ್‌ ಇನ್‌ಸ್ಪೆಕ್ಟರ್‌ಗಳು, 655 ಸಹಾಯಕ ಸಬ್ ಇನ್‌ಸ್ಪೆಕ್ಟರ್‌ಗಳು, 4,833 ಕಾನ್​ಸ್ಟೆಬಲ್‌ಗಳು, 1,048 ಮಹಿಳಾ ಪೊಲೀಸ್ ಸಿಬ್ಬಂದಿ, 597 ಮಫ್ತಿ ಸಿಬ್ಬಂದಿ, 3,170 ಗೃಹರಕ್ಷಕ ದಳದ ಸಿಬ್ಬಂದಿ ನಗರದಾದ್ಯಂತ ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ. ಅದರ ಜೊತೆಗೆ 72 ಕೆಎಸ್‌ಆರ್​ಪಿ ಪೊಲೀಸ್ ತುಕಡಿಗಳನ್ನು ಹೆಚ್ಚುವರಿಯಾಗಿ ಭದ್ರತೆಗೆ ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಮಹಿಳೆಯರ ಸುರಕ್ಷತೆಗಾಗಿ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ಸುರಕ್ಷತಾ ತಾಣವನ್ನು ನಿರ್ಮಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ‌ ಪೊಲೀಸ್ ಕಿಯೋಸ್ಕ್​ಗಳನ್ನು ತೆರೆಯಲಾಗಿದೆ. ಮಕ್ಕಳು ಕಾಣೆಯಾದಲ್ಲಿ ಅಥವಾ ಯಾವುದೇ ರೀತಿಯ ಕಳ್ಳತನಕ್ಕೆ ಸಂಬಂಧಿಸಿದ ದೂರುಗಳನ್ನು ನೀಡಬಹುದಾಗಿದೆ. ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ಕಣ್ಗಾವಲಿಡಲು ಸಿಬ್ಬಂದಿಗೆ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ.  

ಡಿ.31ರ ರಾತ್ರಿ 11 ರಿಂದ ಜನವರಿ ಬೆಳಗಿನ ಜಾವ 2 ರವರೆಗೆ‌ ಎಂ.ಜಿ.ರಸ್ತೆಯ ಮೆಟ್ರೊ ನಿಲ್ದಾಣ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ವಿವಿಧ ಕಡೆಗಳಿಂದ ಬಂದಿಳಿಯಲು‌ ಮಾತ್ರ ಅವಕಾಶವಿರಲಿದೆ. ಎಂ.ಜಿ. ರಸ್ತೆಯಿಂದ ತೆರಳುವವರು ಟ್ರಿನಿಟಿ ಸರ್ಕಲ್ ಹಾಗೂ ಕಬ್ಬನ್‌ಪಾರ್ಕ್ ಮೆಟ್ರೊ ನಿಲ್ದಾಣಗಳನ್ನು ಬಳಸಬಹುದಾಗಿದೆ.

ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿಯಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಡಿಸೆಂಬರ್ 31ರಂದು ರಾತ್ರಿ ಡ್ರೋನ್ ಕ್ಯಾಮೆರಾಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದೆ.

ಕಾನೂನು ಬಾಹಿರ ಚಟುವಟಿಕೆಗಳು, ಡ್ರಗ್ಸ್ ಸರಬರಾಜು, ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಲಭಿಸಿದಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಯಾವುದಾದರೂ ವಾರಸುದಾರರು ಇಲ್ಲದ ವಸ್ತುಗಳು ಕಂಡು ಬಂದಲ್ಲಿ ತಕ್ಷಣ ಸ್ಥಳೀಯ ಪೊಲೀಸರು ಅಥವಾ ಪೊಲೀಸ್ ಸಹಾಯವಾಣಿ ಸಂಖ್ಯೆ 112ಕ್ಕೆ ಮಾಹಿತಿ ನೀಡಲು ಕೋರಲಾಗಿದೆ.

ಡಿ.31ಕ್ಕೆ ಬಿಎಂಟಿಸಿ ಹೆಚ್ಚುವರಿ ಬಸ್‌

ಹೊಸ ವರ್ಷಾಚರಣೆಯ ಪ್ರಯುಕ್ತ ಡಿ.31ರಂದು ರಾತ್ರಿ 11ರಿಂದ 2 ಗಂಟೆಯವರೆಗೆ ವಿವಿಧ ಮಾರ್ಗಗಳಲ್ಲಿ ಹೆಚ್ಚುವರಿ ಸಾರಿಗೆ ಸೌಲಭ್ಯ ಒದಗಿಸಲು ಬಿಎಂಟಿಸಿ ನಿರ್ಧರಿಸಿದೆ.

ಬ್ರಿಗೇಡ್‌ ರಸ್ತೆಯಿಂದ ಎಲೆಕ್ಟ್ರಾನಿಕ್ಸ್‌ ಸಿಟಿ ಮತ್ತು ಜಿಗಣಿಗೆ, ಎಂ.ಜಿ. ರಸ್ತೆಯಿಂದ ಸರ್ಜಾಪುರ, ಕೆಂಗೇರಿ–ಕೆಎಚ್‌ಬಿ ಕ್ವಾರ್ಟರ್ಸ್‌, ಜನಪ್ರಿಯ ಟೌನ್‌ಶಿಪ್‌, ನೆಲಮಂಗಲ, ಯಲಹಂಕ ಉಪನಗರ 5ನೇ ಹಂತ, ಯಲಹಂಕ, ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿಗೆ ಹೆಚ್ಚುವರಿ ಬಸ್‌ ಸಂಚರಿಸಲಿವೆ. 

ಇದಲ್ಲದೇ ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ, ಜಂಕ್ಷನ್‌ಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್‌. ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್‌ಗಳಿಂದ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.


ಸಾರ್ವಜನಿಕರು ಏನು ಮಾಡಬಾರದು..‌

* ಪಟಾಕಿಗಳನ್ನು ಸಿಡಿಸಬಾರದು

* ಅತಿವೇಗ, ಅಜಾಗರೂಕತೆಯಿಂದ ವಾಹನ ಚಲಾಯಿಸಬಾರದು

* ನಿರ್ಬಂಧಿತ ಪ್ರದೇಶಗಳಿಗೆ ಪ್ರವೇಶಿಸಬಾರದು

* ಮೋಜಿಗಾಗಿ ತುರ್ತು ಕರೆಗಳಿಗೆ ಸಂಪರ್ಕಿಸಬಾರದು

* ಅನವಶ್ಯಕವಾಗಿ ಗುಂಪುಗೂಡಬಾರದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.