ADVERTISEMENT

ಬೆಂಗಳೂರು: ನಗರದಲ್ಲಿ ಸರಣಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 15:44 IST
Last Updated 11 ಆಗಸ್ಟ್ 2025, 15:44 IST
<div class="paragraphs"><p>ಖಾಲಿ ಹುದ್ದೆ ಭರ್ತಿ ಮಾಡುವಂತೆ ಆಗ್ರಹಿಸಿ ರಾಜ್ಯ ವಿದ್ಯಾರ್ಥಿಗಳ ಅಸೋಸಿಯೇಷನ್ ನಡೆಸಿದ ಪ್ರತಿಭಟನೆ ವೇಳೆ ಅಭ್ಯರ್ಥಿಯೊಬ್ಬರು ರಕ್ತದಲ್ಲಿ ಘೋಷಣೆ ಬರೆದರು.&nbsp; </p></div>

ಖಾಲಿ ಹುದ್ದೆ ಭರ್ತಿ ಮಾಡುವಂತೆ ಆಗ್ರಹಿಸಿ ರಾಜ್ಯ ವಿದ್ಯಾರ್ಥಿಗಳ ಅಸೋಸಿಯೇಷನ್ ನಡೆಸಿದ ಪ್ರತಿಭಟನೆ ವೇಳೆ ಅಭ್ಯರ್ಥಿಯೊಬ್ಬರು ರಕ್ತದಲ್ಲಿ ಘೋಷಣೆ ಬರೆದರು. 

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಸರಣಿ ಪ್ರತಿಭಟನೆಗಳು ನಡೆದವು.

ADVERTISEMENT

ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘ, ಹಸಿರು ಸೇನೆ ಪ್ರತಿಭಟನೆ ನಡೆಸಿದರೆ, ಐಡಿಬಿಐ ಬ್ಯಾಂಕ್ ಅನ್ನು ಖಾಸಗಿಯವರಿಗೆ ಮಾರಾಟ ಮಾಡಬೇಕೆಂಬ ಪ್ರಸ್ತಾವ ಕೈ ಬಿಡಬೇಕು ಎಂದು ಒತ್ತಾಯಿಸಿ ಯುನೈಟೆಡ್‌ ಫೋರಂ ಆಫ್ ಐಡಿಬಿಐ ಆಫೀಸರ್ಸ್ ಆ್ಯಂಡ್ ಎಂಪ್ಲಾಯಿಸ್‌ ಪ್ರತಿಭಟಿಸಿತು. ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ರಕ್ತದಲ್ಲಿ ಬರೆದ ಫಲಕಗಳನ್ನು ರಾಜ್ಯ ವಿದ್ಯಾರ್ಥಿಗಳ ಅಸೋಸಿಯೇಷನ್ ಪ್ರದರ್ಶಿಸಿತು. 

ಕೃಷಿ ತಿದ್ದುಪಡಿ ಕಾಯ್ದೆ: ರೈತ ವಿರೋಧಿಯಾಗಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವುದರ ಜೊತೆಗೆ ರೈತರ ಸಾಲಮನ್ನಾ ಹಾಗೂ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ವಾಸುದೇವ ಮೇಟಿ ಮಾತನಾಡಿ, ‘ದೇಶದಲ್ಲಿ ಶೇಕಡ 80ರಷ್ಟು ಜನತೆ ಕೃಷಿ ಅವಲಂಬಿಸಿ ಬದುಕುತ್ತಿದ್ದಾರೆ. ಆದರೆ, ಆಳುವ ಸರ್ಕಾರ ಮಾತ್ರ ರೈತರನ್ನು ಎರಡನೇ ದರ್ಜೆಯಂತೆ ಕಾಣುತ್ತಿವೆ. ರೈತ ವಿರೋಧಿ ಕಾನೂನುಗಳ ಮೂಲಕ ಬದುಕಿಗೆ ಕಂಟಕವಾಗುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವುದರ ಜೊತೆಗೆ ರೈತರ ಆದಾಯ ದ್ವಿಗುಣಗೊಳಿಸಿ ಸುಸ್ಥಿರ ಕೃಷಿ ಅಭಿವೃದ್ಧಿಯನ್ನು ಉತ್ತೇಜಿಸುವ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಬೆಳೆ ನಷ್ಠ, ಖಾಸಗಿ ಬ್ಯಾಂಕ್, ಕೈ ಸಾಲಗಳಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾಗೊಳಿಸಲು ನಿರ್ಣಯಿಸಬೇಕು. ಮೈಸೂರು, ಚಾಮರಾಜನಗರದಲ್ಲಿ ಅಕ್ರಮ ಗಣಿಗಾರಿಕೆ ಮಿತಿ ಮೀರಿದೆ ಎಂದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸುಭಾಷ್ ನಾಯ್ಕ್‌, ಬಂಡೆಪ್ಪಗೌಡ ಪಾಟೀಲ್, ಫಕೀರಪ್ಪ ಪೂಜಾರಿ ಇದ್ದರು.

ಖಾಲಿ ಹುದ್ದೆ ಭರ್ತಿ: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ವಿದ್ಯಾರ್ಥಿಗಳ ಅಸೋಸಿಯೇಷನ್ ಪ್ರತಿಭಟನೆ ನಡೆಸಿತು.

‘ರಾಜ್ಯದಲ್ಲಿ 2,76,386 ಸರ್ಕಾರಿ ಹುದ್ದೆಗಳು ಖಾಲಿ ಇವೆ. ಹುದ್ದೆಗಳ ಭರ್ತಿಯಲ್ಲಿ ಉಂಟಾದ ವಿಳಂಬದಿಂದ ಆಡಳಿತ ಯಂತ್ರದ ಕಾರ್ಯಕ್ಷಮತೆ ಕುಸಿಯುತ್ತಿದೆ. ಜನಸಾಮಾನ್ಯರ ನಿತ್ಯದ ಜೀವನ, ಮಕ್ಕಳ ಶಿಕ್ಷಣ, ಸಾರ್ವಜನಿಕ ಆರೋಗ್ಯ ಸೇವೆ, ಗ್ರಾಮೀಣ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ತೊಂದರೆ ಉಂಟಾಗಿದೆ. ಹುದ್ದೆಗಳ ಭರ್ತಿಯನ್ನು ತುರ್ತು ಆಧಾರದ ಮೇಲೆ ಪ್ರಾರಂಭಿಸಬೇಕು’ ಎಂದು ಅಸೋಸಿಯೇಷನ್ ಅಧ್ಯಕ್ಷ ಕಾಂತ್‌ಕುಮಾರ್ ಆಗ್ರಹಿಸಿದರು.

‘ನೇಮಕಾತಿ ವೇಳಾಪಟ್ಟಿಯನ್ನು ಯುಪಿಎಸ್‌ಸಿ ಮಾದರಿಯಲ್ಲಿ ವರ್ಷಕ್ಕೊಮ್ಮೆ ಪ್ರಕಟಿಸಿ, ಅದರಲ್ಲಿ ಪರೀಕ್ಷೆ ದಿನಾಂಕ, ಅರ್ಜಿ ಆಹ್ವಾನ, ಫಲಿತಾಂಶ ಘೋಷಣೆ ನಿಗದಿಪಡಿಸಬೇಕು. ಎಲ್ಲಾ ಇಲಾಖೆಗಳ ಸರ್ಕಾರಿ ನೇಮಕಾತಿಗಳ ಗರಿಷ್ಠ ವಯೋಮಿತಿಯನ್ನು 35 ವರ್ಷ ಮಾಡಬೇಕು. ವಿಶ್ವವಿದ್ಯಾಲಯ ಅನುದಾನ ಆಯೋಗ ನಿಗದಿಪಡಿಸಿದ ಅರ್ಹತೆಗಳ ಪ್ರಕಾರ ಉಪನ್ಯಾಸಕರ ನೇಮಕಾತಿ ನಡೆಯಬೇಕು. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಬೋಧನೆಗಾಗಿ ಕಡ್ಡಾಯವಾಗಿ ಯುಜಿಸಿ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರನ್ನಷ್ಟೇ ನೇಮಿಸಬೇಕು ಎಂದು ಉಪಾಧ್ಯಕ್ಷ ಎಂ.ಎಸ್.ಶ್ರೇಯಸ್, ಪ್ರಧಾನ ಕಾರ್ಯದರ್ಶಿ ಜೆ.ಸಂಜಯ್ ಕುಮಾರ್ ಒತ್ತಾಯಿಸಿದರು.

ಪ್ರಸ್ತಾವ ಕೈ ಬಿಡಿ: ಐಡಿಬಿಐ ಬ್ಯಾಂಕ್ ಅನ್ನು ಖಾಸಗಿಯವರಿಗೆ ಮಾರಾಟ ಮಾಡಬೇಕೆಂಬ ಪ್ರಸ್ತಾವ ಕೈ ಬಿಡಬೇಕು ಎಂದು ಒತ್ತಾಯಿಸಿ ಯುನೈಟೆಡ್‌ ಫೋರಂ ಆಫ್ ಐಡಿಬಿಐ ಆಫೀಸರ್ಸ್ ಆ್ಯಂಡ್ ಎಂಪ್ಲಾಯಿಸ್‌ (ಯುಎಫ್‌ಐಒಇ) ಪ್ರತಿಭಟನೆ ನಡೆಸಿತು.

ಬ್ಯಾಂಕ್‌ನಲ್ಲಿ ಖಾಲಿ ಇರುವ 5 ಸಾವಿರ ಗುಮಾಸ್ತ ಹುದ್ದೆ ಭರ್ತಿ ಮಾಡಬೇಕು. ಕೆಲಸದ ಒತ್ತಡ ಕಡಿಮೆ ಮಾಡಬೇಕು, ಸಿಬ್ಬಂದಿಗೆ ವೈದ್ಯಕೀಯ ನೆರವು ಯೋಜನೆ ಜಾರಿಗೊಳಿಸಬೇಕು ಹಾಗೂ ಅಧಿಕಾರಿಗಳಿಗೆ ದ್ವಿಪಕ್ಷೀಯ ವರ್ಗಾವಣೆ ನೀತಿ ಪರಿಚಯಿಸಬೇಕು ಎಂದು ಆಗ್ರಹಿಸಿದರು.

ಯುಎಫ್‌ಐಒಇ ಸಂಚಾಲಕ ದೇವಿದಾಸ್‌ ತುಳಜಪುರಕರ್, ಜಂಟಿ ಸಂಚಾಲಕ ವಿಠಲ್‌ ಕೊಟೇಶ್ವರ ರಾವ್ ಇದ್ದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು .

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್‌ ಫೋರಂ ಆಫ್ ಐಡಿಬಿಐ ಆಫೀಸರ್ಸ್ ಆ್ಯಂಡ್ ಎಂಪ್ಲಾಯಿಸ್‌ (ಯುಎಫ್‌ಐಒಇ) ಪ್ರತಿಭಟನೆ ನಡೆಸಿತು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.