ಬೆಂಗಳೂರು: ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಬಹುತೇಕ ರಸ್ತೆಗಳು ಹಾಳಾಗಿ ಗುಂಡಿಗಳು ಬಿದ್ದಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ದಟ್ಟಣೆ ಕಿರಿಕಿರಿ ತಪ್ಪಿಸುವುದಕ್ಕಾಗಿ ಸಂಚಾರ ಪೊಲೀಸರೇ, ಕಾರ್ಮಿಕರ ಸಹಾಯದಿಂದ ಗುಂಡಿಗಳನ್ನು ಮುಚ್ಚಿಸಿದರು.
ಮೈಸೂರು ರಸ್ತೆಯ ಬಹುತೇಕ ಕಡೆ ದೊಡ್ಡದಾದ ಗುಂಡಿಗಳು ಬಿದ್ದಿದ್ದವು. ರಾಜಾಜಿನಗರ, ಯಶವಂತಪುರ, ಆಡುಗೋಡಿ, ದೇವನಹಳ್ಳಿ, ಎಚ್ಎಸ್ಆರ್ ಲೇಔಟ್ ಹಾಗೂ ಸುತ್ತಮುತ್ತಲ ಠಾಣೆ ವ್ಯಾಪ್ತಿಯ ರಸ್ತೆಗಳೂ ಹಾಳಾಗಿದ್ದವು. ಎಲ್ಲ ರಸ್ತೆಯಲ್ಲೂ ಗುಂಡಿಗಳಿಗೆ ಕಲ್ಲು ಹಾಗೂ ಕಾಂಕ್ರಿಟ್ ಹಾಕಿ ಪೊಲೀಸರು ಮುಚ್ಚಿಸಿದರು. ಕೆಲ ಸಿಬ್ಬಂದಿ ಖುದ್ದಾಗಿ ಗುಂಡಿಗಳನ್ನು ಮುಚ್ಚಿ, ಕೊನೆಯಲ್ಲಿ ತೇಪೆ ಹಾಕಿದರು.
ಸುಗಮ ಸಂಚಾರ ಕರ್ತವ್ಯದ ಜೊತೆಯಲ್ಲೇ ಗುಂಡಿ ಮುಚ್ಚಿಸಿದ ಪೊಲೀಸರ ಕೆಲಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊಗಳನ್ನು ಹಂಚಿಕೊಂಡಿರುವ ಕೆಲವರು, ಬಿಬಿಬಿಎಂಪಿ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ‘ಜನರಿಂದ ತೆರಿಗೆಸಂಗ್ರಹಿಸುವ ಬಿಬಿಎಂಪಿ ಅಧಿಕಾರಿಗಳಿಗೆ ನಾಚಿಕೆ ಆಗಬೇಕು. ಎಷ್ಟು ಬೈದರೂ ಅಧಿಕಾರಿಗಳಿಗೆ ಬುದ್ಧಿ ಬರುತ್ತಿಲ್ಲ.ಸಂಚಾರ ಪೊಲೀಸರನ್ನು ನೋಡಿಅಧಿಕಾರಿಗಳು ಕಲಿಯಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.