ADVERTISEMENT

ಬೆಂಗಳೂರು | ನಿವೃತ್ತ ಎಸಿಪಿ ಅಡ್ಡಗಟ್ಟಿ ಚಿನ್ನಾಭರಣ ಸುಲಿಗೆ: ಮೂವರ ಸೆರೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 14:17 IST
Last Updated 12 ಸೆಪ್ಟೆಂಬರ್ 2025, 14:17 IST
<div class="paragraphs"><p>ಸೈಯದ್‌ ಮೊಹ್ಸಿನ್‌,&nbsp; ಮೊಹಮ್ಮದ್ ಸಲ್ಮಾನ್,&nbsp;ಸೈಯದ್‌ ಇರ್ಫಾನ್</p></div>

ಸೈಯದ್‌ ಮೊಹ್ಸಿನ್‌,  ಮೊಹಮ್ಮದ್ ಸಲ್ಮಾನ್, ಸೈಯದ್‌ ಇರ್ಫಾನ್

   

ಬೆಂಗಳೂರು: ವಾಯುವಿಹಾರ ಮುಗಿಸಿ ಮನೆಯತ್ತ ತೆರಳುತ್ತಿದ್ದ ನಿವೃತ್ತ ಎಸಿಪಿ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ಕಸಿದುಕೊಂಡು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡಿ.ಜೆ.ಹಳ್ಳಿಯ ನಿವಾಸಿಗಳಾದ ಸೈಯದ್‌ ಮೊಹ್ಸಿನ್ (30), ಮೊಹಮ್ಮದ್ ಸಲ್ಮಾನ್ (20) ಹಾಗೂ ಸೈಯ್ಯದ್ ಇರ್ಫಾನ್ (23) ಬಂಧಿತರು. ಆರೋಪಿಗಳಿಂದ ಚಿನ್ನಾಭರಣ ಹಾಗೂ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಬಳಿ ನಿವೃತ್ತ ಎಸಿಪಿ ಎಚ್.ಸುಬ್ಬಣ್ಣ ಅವರಿಗೆ ಚಾಕುವಿನಿಂದು ತಿವಿದು ₹8 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿಕೊಂಡು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.

‘ಸುಬ್ಬಣ್ಣ ಅವರಿಗೆ ಬೆಳಗಿನ ಜಾವ ವಾಯುವಿಹಾರಕ್ಕೆ ಹೋಗುವ ಅಭ್ಯಾಸವಿತ್ತು. ಎಂದಿನಂತೆ ವಾಯುವಿಹಾರ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಮಾಸ್ಕ್ ಧರಿಸಿ, ಬಂದಿದ್ದ ಆರೋಪಿಗಳು ಅವರನ್ನು ಅಡ್ಡಗಟ್ಟಿದ್ದರು. ಬಳಿಕ, ಚಾಕು ತೋರಿಸಿ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದುಕೊಂಡಿದ್ದರು. ಪ್ರತಿರೋಧ ತೋರಲು ಮುಂದಾದ ಸುಬ್ಬಣ್ಣ ಅವರ ಕೈಗೆ ಚಾಕುವಿನಿಂದ ಹಲ್ಲೆ ಮಾಡಿ, ಕೈಯಲ್ಲಿದ್ದ ಚಿನ್ನದ ಬ್ರೇಸ್‌ಲೆಟ್ ಹಾಗೂ ಸರ ಕಸಿದುಕೊಂಡು ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.

ಸುಬ್ಬಣ್ಣ ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.