
ಸಾವು
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಅತಿ ವೇಗವಾಗಿ ಬಂದ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಮೈಕೊ ಲೇಔಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚನ್ನಪಟ್ಟಣದ ಪ್ರಮೋದ್ (29) ಮೃತ ಬೈಕ್ ಸವಾರ. ಇವರು ವೃತ್ತಿಯಲ್ಲಿ ನಂದಿನಿ ಹಾಲು ಸರಬರಾಜು ಮಾಡುವ ಕ್ಯಾಂಟರ್ ವಾಹನದ ಚಾಲಕ.
ಸಹೋದರನೊಂದಿಗೆ ಕೆಂಗೇರಿಯಲ್ಲಿ ನೆಲಸಿದ್ದ ಪ್ರಮೋದ್, ಬೆಳಿಗ್ಗೆ 6.45ರ ಸುಮಾರಿಗೆ ಹಾಲು ಸರಬರಾಜಿನ ಕ್ಯಾಂಟರ್ ವಾಹನ ತರಲು ದ್ವಿಚಕ್ರ ವಾಹನದಲ್ಲಿ ಡೇರಿ ಬಳಿ ಹೋಗುತ್ತಿದ್ದರು. ಕ್ರೈಸ್ಟ್ ಕಾಲೇಜು–ಡೇರಿ ಸರ್ಕಲ್ ಸಮೀಪದ ಸರ್ವೀಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಅಸುನೀಗಿದರು.
ಅಪಘಾತದ ಬಳಿಕ ವಾಹನ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮೈಕೊ ಲೇಔಟ್ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡರು. ಪರಾರಿಯಾಗಿರುವ ಚಾಲಕನ ಪತ್ತೆಗೆ ಶೋಧ ಮುಂದುವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.