
ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿ ಸಮೀಪದ ನಾಗದೇವನಹಳ್ಳಿಯಲ್ಲಿ ಘಟನೆ ನಡೆದಿದೆ. ಆರೋಪಿಯ ವಿರುದ್ಧ ರೌಡಿಶೀಟ್ ತೆರೆಯಲು ಸಿದ್ಧತೆ ನಡೆಸಲಾಗಿದೆ.
ನವೀನ್ ಬಂಧಿತ ಆರೋಪಿ.
ಹಾರ್ನ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನಂಜುಂಡಪ್ಪ (55) ಅವರ ಮೇಲೆ ನವೀನ್ ಅವರು ಹಲ್ಲೆ ನಡೆಸಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿತ್ತು. ಹಲ್ಲೆಗೊಳಗಾದ ನಂಜುಂಡಪ್ಪ ಅವರು ನೀಡಿರುವ ದೂರಿನ ಮೇಲೆ ನವೀನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ಫೆಬ್ರುವರಿ 22ರಂದು ಸಂಜೆ 5.20ರ ಸುಮಾರಿಗೆ ನಾಗದೇವನಹಳ್ಳಿಯ ಆರ್.ಆರ್. ಲೇಔಟ್ನ ರಸ್ತೆಯಲ್ಲಿ ನಂಜುಂಡಪ್ಪ ಅವರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಕಾರಿನಲ್ಲಿ ಬಂದ ನವೀನ್ ಅವರು ಮನೆ ಮುಂದೆ ಕಾರು ನಿಲ್ಲಿಸಲು ಪದೇ ಪದೆ ಹಾರ್ನ್ ಮಾಡಿದ್ದ. ಕಾರು ಮುಂದೆ ಹೋಗಬಹುದೆಂದು ಭಾವಿಸಿದ್ದ ನಂಜುಂಡಪ್ಪ ಅವರು ‘ರಸ್ತೆಯಲ್ಲಿ ಸಾಕಷ್ಟು ಜಾಗವಿದೆ ಅಲ್ಲವೇ? ಮುಂದಕ್ಕೆ ಹೋಗಿ’ ಎಂದು ನವೀನ್ಗೆ ಹೇಳಿದ್ದರು. ಆಗ ಕಾರಿನಿಂದ ಇಳಿದ ಆರೋಪಿ, ನಂಜುಂಡಪ್ಪ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ತಕ್ಷಣ ನವೀನ್ನ ತಾಯಿ ಬಂದು ಮಗನನ್ನು ಸಮಾಧಾನಪಡಿಸಲು ಯತ್ನಿಸಿದ್ದರು. ಆದರೂ ಸಮಾಧಾನವಾಗದ ನವೀನ್ ಅವರು ನಂಜುಂಡಪ್ಪ ಅವರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದ. ಬಳಿಕ ಸ್ಥಳಕ್ಕೆ ಬಂದ ಸ್ಥಳೀಯರು, ಜಗಳ ಬಿಡಿಸಿ ಕಳುಹಿಸಿದ್ದರು’ ಎಂದು ಸೈಬರ್ ಪೊಲೀಸರು ಹೇಳಿದರು.
‘ನಂಜುಂಡಪ್ಪ ಅವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯ ವಿರುದ್ಧ ಈ ಹಿಂದೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಹಾಸನ ಠಾಣೆಯಲ್ಲೂ ಒಂದು ಪ್ರಕರಣ ದಾಖಲಾಗಿದೆ. ಆರೋಪಿಯು ಜನರಿಗೆ ಭಯ ಹುಟ್ಟಿಸುವಂತಹ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದ ಎಂಬುದು ಗೊತ್ತಾಗಿದೆ. ನವೀನ್ ವಿರುದ್ಧ ರೌಡಿಶೀಟ್ ತೆರೆಯಲು ಸೂಚನೆ ನೀಡಲಾಗಿದೆ’ ಎಂದು ನೈರುತ್ಯ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣನವರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.