ADVERTISEMENT

ರಸ್ತೆ ಗುಂಡಿಗಳಿಗೆ ಪೂಜೆ ಸಲ್ಲಿಸಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 4:49 IST
Last Updated 16 ಅಕ್ಟೋಬರ್ 2021, 4:49 IST

ಬೆಂಗಳೂರು: ನಗರದಲ್ಲಿನ ರಸ್ತೆ ಗುಂಡಿಗಳಿಗೆ ಗುರುವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ, ಗಂಭೀರ ಸಮಸ್ಯೆಯನ್ನು ಸರ್ಕಾರ ಕಡೆಗಣಿಸಿರುವ ಬಗ್ಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ–ಪ್ಯಾಕ್‌) ಕಾರ್ಯಕರ್ತರು ಆಯುಧ ಪೂಜೆಯ ದಿನದಂದು ಚಾಲುಕ್ಯ ವೃತ್ತದಲ್ಲಿನ ಗುಂಡಿಗಳಿಗೆ ಪೂಜೆ ಸಲ್ಲಿಸಿದರು.

‘ಜೀವಕ್ಕೆ ಹಾನಿ ಮಾಡುತ್ತಿರುವ ರಸ್ತೆ ಗುಂಡಿಗಳ ಸಮಸ್ಯೆ ಬಗ್ಗೆ ಸರ್ಕಾರ ಗಮನಹರಿಸಬೇಕಾಗಿದೆ. ಮಳೆ ನೀರು ಗುಂಡಿಗಳಲ್ಲಿ ನಿಲ್ಲುವುದರಿಂದ ವಾಹನ ಸವಾರರು ಗಮನಹರಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಗುಂಡಿಗಳು, ಜೀವಕ್ಕೆ ಅಪಾಯ ತಂದೊಡ್ಡಿವೆ. ಈಗಾಗಲೇ ಹಲವು ಅನಾಹುತಗಳು ನಗರದಲ್ಲಿ ಸಂಭವಿಸಿವೆ’ ಎಂದು ಹೋರಾಟಗಾರ್ತಿ ಕವಿತಾ ರೆಡ್ಡಿ ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಬಿಬಿಎಂಪಿಗೆ ಮನವಿಗಳನ್ನು ಸಲ್ಲಿಸಿ ಸಾಕಾಗಿದೆ. ಯಾವುದೇ ಕ್ರಮಗಳನ್ನು ಬಿಬಿಎಂಪಿ ಕೈಗೊಳ್ಳದಿರುವುದರಿಂದ ರಸ್ತೆ ಗುಂಡಿಗಳಿಗೆ ಪೂಜೆ ಮಾಡಿದ್ದೇವೆ’ ಎಂದು ಅವರು ಹೇಳಿದರು.

‘ಸಮಸ್ಯೆಯ ಗಂಭೀರತೆಯನ್ನು ವ್ಯಂಗ್ಯವಾಗಿ ಎತ್ತಿ ತೋರಿಸಲು ಪೂಜೆ ಮಾಡಲಾಗಿದೆ. ಆಯುಧ ಪೂಜೆ ದಿನ ಸಾಂಪ್ರದಾಯಿಕವಾಗಿ ಯಂತ್ರಗಳನ್ನು ಪೂಜಿಸುವುದು ಸಾಮಾನ್ಯ. ಆದರೆ, ಈ ಬಾರಿ, ರಸ್ತೆ ಗುಂಡಿಗಳ ಅಮ್ಮನನ್ನು ಪೂಜಿಸಿದ್ದೇವೆ. ನಾಗರಿಕರ ಯಾವುದೇ ಜೀವವನ್ನು ತೆಗೆದುಕೊಳ್ಳಬೇಡ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.