ADVERTISEMENT

ಬೆಂಗಳೂರು| ರಸ್ತೆಬದಿ ನಿಂತಿದ್ದ ಯುವಕ, ಯುವತಿ ಮೇಲೆ ಹಲ್ಲೆ: ನಾಲ್ವರ ಸೆರೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 15:53 IST
Last Updated 25 ಜನವರಿ 2026, 15:53 IST
   

ಬೆಂಗಳೂರು: ರಸ್ತೆಬದಿ ನಿಂತಿದ್ದ ಯುವತಿ ಹಾಗೂ ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ‌

ವಿಜಯ್‌ ಕುಮಾರ್, ಡೇವಿಡ್, ತೇಜಸ್ವಿ ಹಾಗೂ ಮೋಹಿತ್ ಬಂಧಿತ ಆರೋಪಿಗಳು. ಆರೋಪಿಗಳ ಪೈಕಿ ಕೆಲವರು ಮಡಿಕೇರಿ, ಚಿಕ್ಕಮಗಳೂರು, ಬೆಂಗಳೂರಿನವರಾಗಿದ್ದು, ಖಾಸಗಿ ಆಸ್ಪತ್ರೆ ಹಾಗೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಮೂರು ದಿನಗಳ ಹಿಂದೆ ಮಾರುತಿನಗರ ರಸ್ತೆಯಲ್ಲಿ ಯುವತಿ ಮತ್ತು ಆಕೆಯ ಸ್ನೇಹಿತ ನಿಂತಿದ್ದರು. ಆಗ ಸಮೀಪದಲ್ಲೇ ಪಾರ್ಟಿ ಮುಗಿಸಿಕೊಂಡು ಬಂದ ಆರೋಪಿಗಳು, ಯುವತಿ ಜತೆ ಅಸಭ್ಯವಾಗಿ ವರ್ತಿಸಲು ಯತ್ನಿಸಿದ್ದಾರೆ. ಆಗ ಯುವತಿ ಮತ್ತು ಆಕೆಯ ಸ್ನೇಹಿತ ಪ್ರಶ್ನಿಸಿದಾಗ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಆಕೆ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.