
FIR
– ಕಡತ ಚಿತ್ರ
ಪೀಣ್ಯ ದಾಸರಹಳ್ಳಿ: ಮಗಳ ಚಿಕಿತ್ಸೆಗಾಗಿ ಹಣಕಾಸು ನೆರವು ಪಡೆದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದು, ಇದರಿಂದ ಮನನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪೀಣ್ಯದ ಶಿವಪುರ ಕೆರೆಯ ಬಳಿ ನಡೆದಿದೆ.
ಸಂತ್ರಸ್ತೆ ದೂರು ಆಧರಿಸಿ ಪಾರಿತೋಷ್ ಯಾದವ್ ಎಂಬುವವರ ವಿರುದ್ಧ ರಾಜಗೋಪಾಲ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
‘ಸಂತ್ರಸ್ತೆ ವಿವಾಹಿತೆಯಾಗಿದ್ದು, ಜಾಲತಾಣದ ಮೂಲಕ ಆರೋಪಿಯ ಪರಿಚಯವಾಗಿತ್ತು. ಸಂತ್ರಸ್ತೆಯ ಮಗಳು ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದಳು. ಬಳಿಕ ಮಗಳ ಚಿಕಿತ್ಸೆಗಾಗಿ ಪಾರಿತೋಷ್ ಯಾದವ್ನಿಂದ ₹30 ಸಾವಿರ ಪಡೆದಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿ ಪಾರಿತೋಷ್ ಯಾದವ್, ಸಾಲ ಕೊಟ್ಟಿದ್ದನ್ನೇ ನೆಪ ಮಾಡಿಕೊಂಡು, ದೈಹಿಕವಾಗಿ ತನಗೆ ಸಹಕರಿಸಬೇಕೆಂದು ಸಂತ್ರಸ್ತೆಗೆ ಪೀಡಿಸಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ಆಕೆಯ ಮೊಬೈಲ್ ಸಂಖ್ಯೆಯನ್ನು ವೇಶ್ಯಾವಾಟಿಕೆ ದಂಧೆಕೋರರಿಗೆ ಕೊಡುವುದಾಗಿ, ಸಾರ್ವಜನಿಕ ಶೌಚಾಲಯಗಳಲ್ಲಿ ಬರೆಯುವುದಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ. ಅಲ್ಲದೆ, ಅಶ್ಲೀಲ ಪೋಟೊ ಮತ್ತು ವಿಡಿಯೊಗಳನ್ನು ಸಂತ್ರಸ್ತೆಗೆ ಕಳುಹಿಸಿ ಮಾನಸಿಕ ಹಿಂಸೆ ನೀಡಿದ್ದಾನೆ’ ಎಂದು ಪೊಲೀಸರು ಹೇಳಿದ್ದಾರೆ.
‘ಪಾರಿತೋಷ್ ಯಾದವ್ನ ವಿಚಾರ ಸಂತ್ರಸ್ತೆಯ ಪತಿಗೆ ಗೊತ್ತಾಗಿ ದಂಪತಿ ಮಧ್ಯೆ ಮನಸ್ತಾಪ ಉಂಟಾಗಿತ್ತು. ಇದರಿಂದ ಮನನೊಂದ ಸಂತ್ರಸ್ತೆಯು ಪೀಣ್ಯದ ಸ್ನೇಹಿತೆ ಮನೆಗೆ ಹೋಗಿದ್ದರು. ನಂತರ ಶಿವಪುರ ಕೆರೆಯ ಬಳಿ ಬಂದು ಕೈ ಕೊಯ್ದುಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಸ್ಥಳೀಯರು ಸಂತ್ರಸ್ತೆಯನ್ನು ಕಾಪಾಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.