ಬೆಂಗಳೂರು: ಭಾರತ ‘ಆರ್ಸಿಇಪಿ’ ಒಪ್ಪಂದಕ್ಕೆ ಸಹಿ ಮಾಡದಿದ್ದರೂ ವಿದೇಶಿ ಹೂಡಿಕೆದಾರರು ಭಯಪಡಬೇಕಾಗಿಲ್ಲ, ರಾಜ್ಯದಲ್ಲಿ ಹೂಡಿಕೆದಾರರಿಗೆ ಉತ್ತಮ ಮತ್ತು ಸ್ನೇಹಪರ ವಾತಾವರಣ ಸೃಷ್ಟಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದರು.
ಬೆಂಗಳೂರು ಅರಮನೆ ಆವರಣದಲ್ಲಿ ಸೋಮವಾರ ಆರಂಭಗೊಂಡ ಮೂರು ದಿನಗಳ ‘ಬೆಂಗಳೂರು ತಂತ್ರಜ್ಞಾನ ಶೃಂಗ –2019’ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರಧಾನಿ ಮೋದಿಯವರು ರೈತರು ಮತ್ತು ಬಡವರ ಹಿತ ರಕ್ಷಣೆಯಿಂದಾಗಿ ಆರ್ಸಿಇಪಿಗೆ ಸಹಿ ಮಾಡಿಲ್ಲ. ಅದರ ಅರ್ಥ ಹೂಡಿಕೆದಾರರ ಹಿತ ಕಡೆಗಣಿಸಿದ್ದಾರೆ ಎಂದಲ್ಲ. ಆ ಬಗ್ಗೆ ತಪ್ಪು ಭಾವನೆ ಬೇಡ’ ಎಂದು ಅವರು ಹೇಳಿದರು.
ಬೆಂಗಳೂರು ನಗರವು ತಂತ್ರಜ್ಞಾನ ಕೇಂದ್ರ ಮತ್ತು ನವೋದ್ಯಮಗಳ ರಾಜಧಾನಿಯಾಗುವತ್ತ ದಾಪುಗಾಲಿಡುತ್ತಿದೆ. ‘ಸ್ಟಾರ್ಟ್ಅಪ್ ಬ್ಲಿಂಕ್ ಸ್ಟಾರ್ಟ್ಅಪ್ ಇಕೊ ಸಿಸ್ಟಮ್ ರ್ಯಾಂಕಿಂಗ್ ರಿಪೋರ್ಟ್–2019’ ರ ಪ್ರಕಾರ ಜಗತ್ತಿನ 11 ನೇ ಅತಿ ಉತ್ತಮ ನವೋದ್ಯಮ ವ್ಯವಸ್ಥೆ ಹೊಂದಿರುವ ನಗರ ಬೆಂಗಳೂರು ಎಂದು ಅವರು ಹೇಳಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮಾತನಾಡಿ, ರಾಜ್ಯದ ಜಿಡಿಪಿ ಶೇ 9.2 ಇದ್ದು, ದೇಶದ ಜಿಡಿಪಿಯ ಸರಾಸರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ. ಕರ್ನಾಟಕವು ದೇಶದಲ್ಲಿ ಮಷಿನ್ ಟೂಲ್ ಶೇ 60, ವೈಮಾನಿಕ ಶೇ 67, ಮಾಹಿತಿ ತಂತ್ರಜ್ಞಾನ ಶೇ 39 ಮತ್ತು ಜೀವವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಶೇ 33 ರಷ್ಟು ಪಾಲು ಹೊಂದಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.