ಕೆಂಗೇರಿ: ‘ಚಿಕ್ಕಂದಿನಿಂದಲೂ ನಾನು ವಿದ್ಯಾಭ್ಯಾಸದಲ್ಲಿ ಚುರುಕು. ನೋಡಲು ತುಸು ಕೆಂಪಗೂ ಇದ್ದೇನೆ. ಇದೇ ನನಗೆ ತೊಂದರೆ ತಂದೊಡ್ಡಿತು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಆರ್.ವೇಣುಗೋಪಾಲ್ ಹೇಳಿದರು.
ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಗ್ರಾಮೀಣಾಭಿವೃದ್ಧಿ ವಿಭಾಗ ಹಾಗೂ ಅಂಗವಿಕಲರ ಸಬಲೀಕರಣ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಂಶೋಧನಾ ಅವಧಿಯಲ್ಲಿ ಅನುಸರಿಸಬೇಕಾದ ನಿಯಮಗಳು ಕುರಿತ ಎರಡು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಲಪತಿ ಹುದ್ದೆ ನೇಮಕಾತಿ ರದ್ದು ಕೋರಿ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಯುತ್ತಿರುವ ಕುರಿತು ಮಾತನಾಡಿದ ಅವರು, ‘ಕೆಂಪಗಿದ್ದ ಕಾರಣ ಕೆಲವರು ನನ್ನನ್ನು ಮುಂದುವರಿದ ಸಮುದಾಯಕ್ಕೆ ಸೇರಿದವನೆಂದೇ ಭಾವಿಸಿದ್ದರು. ಈಗಲೂ ಅದೇ ಅನುಮಾನ ಕೆಲವರಲ್ಲಿದೆ. ಆ ಅನುಮಾನದ ಪ್ರತಿಫಲವನ್ನು ಅನುಭವಿಸುತ್ತಿದ್ದೇನೆ’ ಎಂದರು.
‘ಜಾತಿ ಪ್ರಮಾಣ ಪತ್ರದ ಬಗ್ಗೆ ಹಲವು ಬಾರಿ ತನಿಖೆಯಾಗಿದೆ. ನಾನು ವಹ್ನಿ ಕುಲ ಮಹಾಕ್ಷತ್ರಿಯ ತಿಗಳ ಸಮುದಾಯಕ್ಕೆ ಸೇರಿದವನು. ಖ್ಯಾತ ಅರ್ಥಶಾಸ್ತ್ರಜ್ಞ ವೆಂಕಟಗಿರಿಗೌಡ ಅವರ ಗರಡಿಯಲ್ಲಿ ಬೆಳೆದವನು. ಹುದ್ದೆಗಾಗಿ ಹಪಹಪಿಸುವ ಮನಸ್ಥಿತಿಯೂ ನನ್ನದಲ್ಲ. ಸಕಾರಣಗಳಿಲ್ಲದೆ ನಾಲ್ಕಾರು ಬಾರಿ ನನ್ನನ್ನು ಅಮಾನತುಗೊಳಿಸಲಾಗಿದೆ. ಈಗ ಕುಲಪತಿ ಹುದ್ದೆಗೆ ಅನರ್ಹ ಎಂದು ಆರೋಪಿಸಲಾಗಿದೆ. 45 ವರ್ಷಗಳಿಂದ ವಿಶ್ವ ವಿದ್ಯಾಲಯದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ನನಗೆ ನ್ಯಾಯ ದೊರಕಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.