ADVERTISEMENT

ಅಂಕಪಟ್ಟಿ ತಿದ್ದಿದ್ದ ಪ್ರಕರಣ; ಏಜೆನ್ಸಿ ಉದ್ಯೋಗಿ ಬಂಧನ

ಸಿಐಡಿ ಆರ್ಥಿಕ ಅಪರಾಧ ವಿಭಾಗದಿಂದ ತನಿಖೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 20:47 IST
Last Updated 18 ಫೆಬ್ರುವರಿ 2022, 20:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಅಂಕಪಟ್ಟಿಗಳನ್ನು ತಿದ್ದಿ ಅಕ್ರಮ ಎಸಗಿದ್ದ ಪ್ರಕರಣದಲ್ಲಿ, ಏಜೆನ್ಸಿಯೊಂದರ ಉದ್ಯೋಗಿ ಚರಣ್‌ ಎಂಬಾತನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

‘ಬಂಧಿತ ಚರಣ್, ಖಾಸಗಿ ಏಜೆನ್ಸಿ ಪರವಾಗಿ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಕೃತ್ಯದಲ್ಲಿ ಆತನ ಪಾತ್ರವಿರುವ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ, ಆತನನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದು ಸಿಐಡಿ ಮೂಲಗಳು ಹೇಳಿವೆ.

‘2019 ಮತ್ತು 2020ನೇ ಸಾಲಿನಲ್ಲಿ ವಿವಿಧ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ 804 ವಿದ್ಯಾರ್ಥಿ
ಗಳ ಅಂಕಗಳನ್ನು ತಿದ್ದಿ ಅಕ್ರಮ ಎಸಗಲಾಗಿತ್ತು. ಅದು ಗಮನಕ್ಕೆ ಬರುತ್ತಿದ್ದಂತೆ, 804 ವಿದ್ಯಾರ್ಥಿಗಳ ಫಲಿತಾಂಶವನ್ನು ಹಿಂಪಡೆಯಲಾಗಿತ್ತು. ಅಕ್ರಮದ ಬಗ್ಗೆ ವಿಶ್ವವಿದ್ಯಾಲಯದ ಹಿಂದಿನ ಕುಲಸಚಿವರಾಗಿದ್ದ ಕೆ. ಜ್ಯೋತಿ, ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದರು. ಅದೇ ಪ್ರಕರಣದ ತನಿಖೆ ಜವಾಬ್ದಾರಿಯನ್ನು ಸಿಐಡಿಯ ಆರ್ಥಿಕ ವಿಭಾಗಕ್ಕೆ ವಹಿಸಲಾಗಿತ್ತು’ ಎಂದೂ ತಿಳಿಸಿವೆ.

ADVERTISEMENT

ಏಜೆನ್ಸಿ ಸಿಬ್ಬಂದಿ ಮೇಲೆ ಅನುಮಾನ: ‘ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವವರು, ಅಂಕ ನಮೂದಿಸಿ, ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ, ಅಂಕಪಟ್ಟಿ ಸಿದ್ಧಪಡಿಸಿ ಸಿ.ಡಿ, ಇ-ಮೇಲ್‌ ಮೂಲಕ ಕುಲಸಚಿವರಿಗೆ ಕಳುಹಿಸಬೇಕೆಂಬ ನಿಯಮವಿದೆ’ ಎಂದು ಹೇಳಿವೆ.

‘ಉತ್ತರ ಪತ್ರಿಕೆ ಸ್ಕ್ಯಾನ್‌ ಮಾಡುವ ಸಂದರ್ಭದಲ್ಲೇ ಅಂಕಗಳನ್ನು ತಿದ್ದಲಾಗಿತ್ತು. ಸ್ಕ್ಯಾನಿಂಗ್ ಜವಾಬ್ದಾರಿ ವಹಿಸಿಕೊಂಡಿರುವ ತಮಿಳುನಾಡಿನ ಏಜೆನ್ಸಿ ಉದ್ಯೋಗಿ ಚರಣ್‌ ಮೇಲೆ ಅನುಮಾನ ವ್ಯಕ್ತವಾಗಿತ್ತು.’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.