ಬೆಂಗಳೂರು: ಮದುವೆ ಸಮಾರಂಭ ನಡೆಯುತ್ತಿದ್ದ ವೇಳೆ ಕಲ್ಯಾಣ ಮಂಟಪಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಮಾಗಡಿ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿಯ ಪರಮೇಶ್ ಬಂಧಿತ ಆರೋಪಿ.
ಆರೋಪಿಯಿಂದ 400 ಗ್ರಾಂ ಚಿನ್ನಾಭರಣ, ₹91 ಸಾವಿರ ನಗದು ಸಹಿತ ₹36.91 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಕಲ್ಯಾಣ ಮಂಟಪಗಳನ್ನೇ ಗುರಿಯಾಗಿಸಿ ಮದುವೆ ಸಮಾರಂಭಗಳಿಗೆ ಅತಿಥಿಯ ಸೋಗಿನಲ್ಲಿ ಆರೋಪಿ ತೆರಳುತ್ತಿದ್ದ. ಮಾಂಗಲ್ಯ ಧಾರಣೆ ಸಂದರ್ಭದಲ್ಲಿ ವಧು, ವರನ ಕಡೆಯವರ ರೂಮ್ಗೆ ಹೋಗಿ ಚಿನ್ನಾಭರಣ, ನಗದು ದೋಚಿಕೊಂಡು ಪರಾರಿಯಾಗುತ್ತಿದ್ದ. ನಂತರ, ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದ. ಮಾಗಡಿ ರಸ್ತೆ, ಬಸವನಗುಡಿ, ಕಾಮಾಕ್ಷಿಪಾಳ್ಯ, ಕೆಂಗೇರಿ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಎಂದು ಪೊಲೀಸರು ಹೇಳಿದರು.
ಮಾಗಡಿ ರಸ್ತೆಯ ಇಂಡಸ್ಟ್ರಿಯಲ್ ಟೌನ್ನಲ್ಲಿರುವ ಕಮ್ಯುನಿಟಿ ಸೆಂಟರ್ನ ರೂಮ್ಗೆ ನುಗ್ಗಿದ್ದ ಆರೋಪಿ, ₹ 31 ಸಾವಿರ ನಗದನ್ನು ಕದ್ದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.