ADVERTISEMENT

ಬೆಂಗಳೂರು: ಮೂರು ತಿಂಗಳಲ್ಲಿ 59 ಸಾವಿರ ಸ್ಥಳಗಳಲ್ಲಿ ಅನಧಿಕೃತ ಕೇಬಲ್‌ ತೆರವು

ಆದಿತ್ಯ
Published 10 ಫೆಬ್ರುವರಿ 2024, 23:36 IST
Last Updated 10 ಫೆಬ್ರುವರಿ 2024, 23:36 IST
ಬೆಸ್ಕಾಂ ಸಿಬ್ಬಂದಿ ತೆರವು ಮಾಡಿರುವ ಕೇಬಲ್‌.
ಬೆಸ್ಕಾಂ ಸಿಬ್ಬಂದಿ ತೆರವು ಮಾಡಿರುವ ಕೇಬಲ್‌.   

ಬೆಂಗಳೂರು: ವಿದ್ಯುತ್‌ ಕಂಬಗಳನ್ನು ಬಳಸಿಕೊಂಡು ಎಳೆಯಲಾಗಿರುವ ಒಎಫ್‌ಸಿ ಕೇಬಲ್‌, ಡೇಟಾ ಕೇಬಲ್‌, ಟಿ.ವಿ., ಇಂಟರ್‌ನೆಟ್‌ ಕೇಬಲ್‌ಗಳ ವಿರುದ್ಧ ಬೆಸ್ಕಾಂ ಸಮರ ಸಾರಿದೆ. ಮೂರು ತಿಂಗಳಲ್ಲಿ 59 ಸಾವಿರ ಸ್ಥಳಗಳಲ್ಲಿ ಅನಧಿಕೃತ ಕೇಬಲ್ ತೆರವು ಮಾಡಿದೆ.

ಇನ್ನೂ 31 ಸಾವಿರ ಅಪಾಯಕಾರಿ ಸ್ಥಳಗಳನ್ನು ಬೆಸ್ಕಾಂ ಪತ್ತೆ ಹಚ್ಚಿದೆ. ಬೆಂಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಈ ಕೇಬಲ್‌ಗಳ ಹಾವಳಿ ಜನರ ಜೀವಕ್ಕೆ ಕಂಟಕ ಪ್ರಾಯವಾಗುತ್ತಿದೆ.

ಕಳೆದ ಜುಲೈನಲ್ಲಿ ಬೆಂಗಳೂರಿನ ಎಸ್.ಜಿ.ಪಾಳ್ಯದಲ್ಲಿ ಕೇಬಲ್‌ ಕಾರಣಕ್ಕೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ಕಂಬದ ತಂತಿಗಳು ತಗುಲಿ ವಿದ್ಯಾರ್ಥಿನಿಯೊಬ್ಬರಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಸಂಜಯನಗರದಲ್ಲೂ ಕೇಬಲ್‌ನಿಂದ ಆಘಾತ ಸಂಭವಿಸಿತ್ತು. ಅದಾದ ಮೇಲೆ ಬೆಸ್ಕಾಂ ಕೇಬಲ್‌ ತೆರವು ಕಾರ್ಯಾಚರಣೆ ಆರಂಭಿಸಿತ್ತು.

ADVERTISEMENT

ನವೆಂಬರ್‌ನಲ್ಲಿ ಕಾಡುಗೋಡಿ ಸಮೀಪದ ಹೋಪ್‌ ಫಾರ್ಮ್‌ ಜಂಕ್ಷನ್‌ ಬಳಿ ವಿದ್ಯುತ್ ತಂತಿಯನ್ನು ತುಳಿದು ತಾಯಿ ಹಾಗೂ –ಮಗು ಮೃತಪಟ್ಟ ಪ್ರಕರಣ ನಡೆದ ಮೇಲೆ ಕೇಬಲ್‌ ತೆರವು ಕಾರ್ಯಾಚರಣೆಯನ್ನು ಬೆಸ್ಕಾಂ ಮತ್ತಷ್ಟು ಚುರುಕುಗೊಳಿಸಿತ್ತು.

ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಬೆಂಗಳೂರು ವೃತ್ತದ ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಿಭಾಗದಲ್ಲೇ ಹೆಚ್ಚು ಅಪಾಯಕಾರಿ ಸ್ಥಳಗಳಿರುವುದು ಪತ್ತೆಯಾಗಿದೆ. ನಾಲ್ಕು ವಿಭಾಗದ ವೃತ್ತಗಳಲ್ಲಿ ಒಟ್ಟು 68 ಸಾವಿರ ಅಪಾಯಕಾರಿ ಸ್ಥಳಗಳಲ್ಲಿದ್ದು 52,871 ಕಡೆ ತೆರವುಗೊಳಿಸಲಾಗಿದೆ. 15,129 ಕಡೆ ಕೇಬಲ್‌ಗಳು ಜೋತು ಬಿದ್ದು ಅಪಾಯಕ್ಕೆ ಕಾರಣವಾಗುತ್ತಿವೆ.

ಮತ್ತೆ ಕೇಬಲ್‌ ಪ್ರತ್ಯಕ್ಷ: ಬೆಸ್ಕಾಂ ಸಿಬ್ಬಂದಿ ಹಗಲು ಹೊತ್ತಿನಲ್ಲಿ ಕೇಬಲ್‌ಗಳನ್ನು ಕತ್ತರಿಸಿ ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಎರಡು ದಿನಗಳ ನಂತರ ಅದೇ ಸ್ಥಳಗಳಲ್ಲಿ ಕೇಬಲ್‌ಗಳು ಪ್ರತ್ಯಕ್ಷವಾಗುತ್ತಿವೆ. ಇದು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಸಿಬ್ಬಂದಿ ಹೇಳುತ್ತಾರೆ.

‘ಕೇಬಲ್‌ ಅಳವಡಿಕೆಗೆ ವಿದ್ಯುತ್‌ ಕಂಬವನ್ನು ಬಳಸಲು ಅವಕಾಶ ಇರುವುದಿಲ್ಲ. ಆದರೆ, ವಿದ್ಯುತ್‌ ಕಂಬಗಳೇ ಕೇಬಲ್‌ಗಳಿಗೆ ಮಾರ್ಗವಾಗಿವೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

...
ಮಹಾಂತೇಶ್‌ ಬೀಳಗಿ
ತೆರವು ಸ್ಥಳಗಳಲ್ಲಿ ಮತ್ತೆ ಕೇಬಲ್‌ ಅಳವಡಿಸುತ್ತಿರುವ ಆಪರೇಟರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.
ಮಹಾಂತೇಶ್‌ ಬೀಳಗಿ ವ್ಯವಸ್ಥಾಪಕ ನಿರ್ದೇಶಕ ಬೆಸ್ಕಾಂ

ಶಾಲಾ ಆವರಣದಲ್ಲೂ ‘ಅಪಾಯ’

ರಸ್ತೆಬದಿಯಲ್ಲದೇ ಶಾಲೆ–ಕಾಲೇಜು ಆವರಣ ಹಾಗೂ ಕಾಂಪೌಂಡ್‌ ಬಳಿ ಹಾದು ಹೋಗಿರುವ ವಿದ್ಯುತ್‌ ಮಾರ್ಗಗಳಲ್ಲೂ ಅನಧಿಕೃತ ಕೇಬಲ್ ಅಳವಡಿಸಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಆವರಣದಲ್ಲಿ ಮಕ್ಕಳು ಆಟವಾಡುತ್ತಿರುತ್ತಾರೆ. ಅಲ್ಲಿಯೂ ಅಪಾಯದ ಸಾಧ್ಯತೆಯಿದೆ. ಸದ್ಯ ಅಂತಹ 12 ಕಡೆ ಕೇಬಲ್‌ ತೆರವು ಮಾಡಿದ್ದು ಆಪರೇಟರ್‌ಗಳಿಗೆ ಎಚ್ಚರಿಕೆ ಕೊಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.