ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಭಾನುವಾರ (ಸೆ. 22) ನಡೆದ ಟಿ-20 ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ನಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಆರೋಪಿಗಳಿಂದ ₹ 40,29,800 ವಶಪಡಿಸಿಕೊಂಡಿದ್ದಾರೆ.
ನಗರ್ತಪೇಟೆಯ ನಿವಾಸಿ ರಾಣಾ ಸಾಮಾ (35) ಮತ್ತು ರಾಜಾಜಿನಗರದ ಸಂದೀಪ್ (39) ಬಂಧಿತರು. ದಂಧೆಗೆ ಬಳಸುತ್ತಿದ್ದ ಐದು ಮೊಬೈಲ್ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಸಂಪರ್ಕದಲ್ಲಿರುವ ಬುಕ್ಕಿಗಳ ಬಗ್ಗೆ ವಿಚಾರಣೆ ವೇಳೆ ಬಾಯಿಬಿಟ್ಟಿದ್ದು ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಮೂಲಗಳು ಹೇಳಿವೆ.
ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತ ಪೇಟೆಯಲ್ಲಿರುವ ಶಾಸ್ತ್ರೀ ಲೇನ್ನ ಕಟ್ಟಡವೊಂದಲ್ಲಿರುವ ಪಿ.ಎಂ. ಎಂಟರ್ಪ್ರೈಸಸ್ ಅಂಗಡಿಯಲ್ಲಿ ಇವರು ಬೆಟ್ಟಿಂಗ್ನಲ್ಲಿ ತೊಡಗಿದ್ದರು. ಬುಕ್ಕಿಗಳು ಮತ್ತು ಪಂಟರ್ಗಳಿಂದ ಆರೋಪಿಗಳು ಹಣ ಸಂಗ್ರಹಿಸಿ, ಪಣದಲ್ಲಿ ಗೆದ್ದವರಿಗೆ ಹಣ ನೀಡದೆ ವಂಚಿಸುತ್ತಿದ್ದರು ಎಂಬ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.