ಬೆಂಗಳೂರು: ಭಾರತ್ ಬಂದ್ ಭದ್ರತೆಯಲ್ಲಿದ್ದ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ ಮೀನಾ ಅವರ ಕಾಲಿನ ಮೇಲೆ ಕಾರಿನ ಚಕ್ರ ಹರಿದಿದ್ದು, ಅವರು ಗಾಯಗೊಂಡಿದ್ದಾರೆ.
ತುಮಕೂರು ರಸ್ತೆ ಕಡೆಯಿಂದ ಬೆಂಗಳೂರು ಪ್ರವೇಶಿಸುವ ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಗೊರಗುಂಟೆಪಾಳ್ಯ ಬಳಿ ಸೇರಿದ್ದರು. ಸ್ಥಳಕ್ಕೆ ಬಂದ ಕಾರು ತಡೆಯಲು ಡಿಸಿಪಿ ಹಾಗೂ ಸಿಬ್ಬಂದಿ ಮುಂದಾಗಿದ್ದರು. ಆದರೆ, ಚಾಲಕ ಕಾರು ನಿಲ್ಲಿಸಲಿಲ್ಲ.
ಎದುರುಗಿದ್ದ ಡಿಸಿಪಿ ಮೇಲೆಯೇ ಕಾರು ಹರಿಸಲು ಚಾಲಕ ಯತ್ನಿಸಿದ್ದ. ಡಿಸಿಪಿ ಪಕ್ಕಕ್ಕೆ ಸರಿಯುತ್ತಿದ್ದಂತೆ, ಅವರ ಎಡಗಾಲಿನ ಪಾದದ ಮೇಲೆಯೆ ಕಾರಿನ ಚಕ್ರ ಹರಿದು ಹೋಗಿದೆ.
ಗಾಯಗೊಂಡ ಡಿಸಿಪಿ ಸ್ಥಳದಲ್ಲೇ ಕುಳಿತು ಚೇತರಿಸಿಕೊಂಡರು. ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡರು.
ಸಿಬ್ಬಂದಿ ಕಾರು ಜಪ್ತಿ ಮಾಡಿ, ಚಾಲಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
'ಡಿಸಿಪಿ ಕಾಲಿನ ಪಾದಕ್ಕೆ ಪೆಟ್ಟಾಗಿದ್ದು. ಪ್ರಾಥಮಿಕ ಚಿಕಿತ್ಸೆ ಪಡೆದು ಭದ್ರತೆ ಕೆಲಸ ಮುಂದುವರಿಸಿದ್ದಾರೆ' ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.