ADVERTISEMENT

ಬೆಂಗಳೂರು| ಭಾರತ ರಂಗ ಉತ್ಸವದಲ್ಲಿ ನಾಟಕ ಪ್ರದರ್ಶನ, ಸಂವಾದ, ಕವಿಗಳ ಕಲರವ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 15:52 IST
Last Updated 2 ಫೆಬ್ರುವರಿ 2026, 15:52 IST
ಕರ್ನಾಟಕ ನಾಟಕ ಅಕಾಡೆಮಿ ಮಲ್ಲತ್ತಹಳ್ಳಿಯ ಕಲಾ ಗ್ರಾಮದಲ್ಲಿ ಆಯೋಜಿಸಿರುವ ಭಾರತ ರಂಗ ಉತ್ಸವದಲ್ಲಿ ಕಲಾವಿದೆ ಗಿರಿಜಾ ಲೋಕೇಶ್ ಅವರನ್ನು ಗೌರವಿಸಲಾಯಿತು. ಬಿ.ನೀಲಮ್ಮ,  ರವೀಂದ್ರನಾಥ್ ಸಿರಿವಾರ,  ಜಿ.ಎನ್. ಮೋಹನ್,  ಚಿತ್ತರಂಜನ್ ತ್ರಿಪಾಠಿ, ಕೆ.ವಿ.ನಾಗರಾಜಮೂರ್ತಿ, ಕಾ.ತ.ಚಿಕ್ಕಣ್ಣ, ಮುಖ್ಯಮಂತ್ರಿ ಚಂದ್ರು, ವೀಣಾಶರ್ಮ ಭೂಸನೂರಮಠ ಉಪಸ್ಥಿತರಿದ್ದರು.
ಕರ್ನಾಟಕ ನಾಟಕ ಅಕಾಡೆಮಿ ಮಲ್ಲತ್ತಹಳ್ಳಿಯ ಕಲಾ ಗ್ರಾಮದಲ್ಲಿ ಆಯೋಜಿಸಿರುವ ಭಾರತ ರಂಗ ಉತ್ಸವದಲ್ಲಿ ಕಲಾವಿದೆ ಗಿರಿಜಾ ಲೋಕೇಶ್ ಅವರನ್ನು ಗೌರವಿಸಲಾಯಿತು. ಬಿ.ನೀಲಮ್ಮ,  ರವೀಂದ್ರನಾಥ್ ಸಿರಿವಾರ,  ಜಿ.ಎನ್. ಮೋಹನ್,  ಚಿತ್ತರಂಜನ್ ತ್ರಿಪಾಠಿ, ಕೆ.ವಿ.ನಾಗರಾಜಮೂರ್ತಿ, ಕಾ.ತ.ಚಿಕ್ಕಣ್ಣ, ಮುಖ್ಯಮಂತ್ರಿ ಚಂದ್ರು, ವೀಣಾಶರ್ಮ ಭೂಸನೂರಮಠ ಉಪಸ್ಥಿತರಿದ್ದರು.   

ಬೆಂಗಳೂರು: ‘ರಾಷ್ಟ್ರೀಯ ನಾಟಕ ಶಾಲೆಯು(ಎನ್‌ಎಸ್‌ಡಿ) ನಗರದ ಮಲ್ಲತ್ತಹಳ್ಳಿ ಕಲಾ ಗ್ರಾಮದಲ್ಲಿ ನಿರ್ಮಿಸಿರುವ ರೆಪರ್ಟರಿಯು ಫೆಬ್ರವರಿ 19ರಿಂದ ಆರಂಭಗೊಳ್ಳಲಿದೆ’ ಎಂದು ಎನ್ಎಸ್‌ಡಿ ನಿರ್ದೇಶಕ ಚಿತ್ತರಂಜನ್ ತ್ರಿಪಾಠಿ ತಿಳಿಸಿದರು.

ಕರ್ನಾಟಕ ನಾಟಕ ಅಕಾಡೆಮಿ, ರಾಷ್ಟ್ರೀಯ ರಂಗಶಾಲೆಯೊಂದಿಗೆ ಮಲ್ಲತ್ತಹಳ್ಳಿ ಕಲಾ ಗ್ರಾಮದಲ್ಲಿ  ಹಮ್ಮಿಕೊಂಡಿರುವ ಭಾರತ ರಂಗ ಉತ್ಸವ ಹಾಗೂ ರಂಗ ಪರಿಷೆಯಲ್ಲಿ ಸೋಮವಾರ ಪಾಲ್ಗೊಂಡು ಅವರು ಮಾತನಾಡಿದರು.

‘ಎನ್‌ಎಸ್‌ಡಿ ಎಲ್ಲಾ ರಾಜ್ಯಗಳಲ್ಲೂ ರಂಗೋತ್ಸವ ನಡೆಸಲು ನೆರವು ನೀಡುತ್ತಿದೆ. ಕರ್ನಾಟಕದಲ್ಲೂ ರೆಪರ್ಟರಿ ಆರಂಭಿಸುವ ಬೇಡಿಕೆಗೆ ಸ್ಪಂದಿಸಿದ್ದೇವೆ. ಈಗಾಗಲೇ ₹4 ಕೋಟಿ ಅನುದಾನ ಒದಗಿಸಿದ್ದು, 200 ಆಸನಗಳ ಸಾಮರ್ಥ್ಯದ ಸಭಾಂಗಣದೊಂದಿಗೆ ರೆಪರ್ಟರಿ ಶುರುವಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮಾತನಾಡಿ, ‘ರಂಗ ಉತ್ಸವಕ್ಕೆ ಎನ್‌ಎಸ್‌ಡಿ ತಮಿಳುನಾಡಿಗೆ ನೆರವು ನೀಡುತ್ತಿದೆ. ನಮಗೂ ಅವಕಾಶ ಮಾಡಿಕೊಡಿ ಎಂದಾಗ 16 ನಾಟಕಗಳನ್ನು ಹಿಂದಿನ ವರ್ಷದ ಉತ್ಸವಕ್ಕೆ ನೀಡಿತ್ತು. ಈ ವರ್ಷವೂ ಸಹಕಾರ ನೀಡಿದೆ. ರೆಪರ್ಟರಿ ಆರಂಭಗೊಳ್ಳುವುದರಿಂದ ಸಹಕಾರಿ ಆಗಲಿದೆ’ ಎಂದು ತಿಳಿಸಿದರು.

ಕಲಾವಿದೆ ಗಿರಿಜಾ ಲೋಕೇಶ್‌ ಅವರಿಗೆ ಗೌರವ ಸಲ್ಲಿಸಲಾಯಿತು. ಮುಖ್ಯಮಂತ್ರಿ ಚಂದ್ರು, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ, ಅಕಾಡೆಮಿ ರಿಜಿಸ್ಟ್ರಾರ್‌ ನೀಲಮ್ಮ ಉಪಸ್ಥಿತರಿದ್ದರು.

ನಂತರ ‘ಮುಖ್ಯಮಂತ್ರಿ’, ‘ಸಾಲು ಮರಗಳ ತಾಯಿ’, ‘ಧನ್ವಂತರಿ ಚಿಕಿತ್ಸೆ’ ನಾಟಕ ಪ್ರದರ್ಶನಗೊಂಡವು. ಎರಡನೇ ದಿನ ನಾಟಕೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು.

ಸಾಹಿತ್ಯ ಎಚ್ಚರಗೊಳಿಸಲಿ: ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಲೇಖಕ ಜಿ.ಎನ್.ಮೋಹನ್‌ ಮಾತನಾಡಿ, ‘ಪುಸ್ತಕಗಳನ್ನು ದ್ವೇಷಿಸುವ ನಾಝಿ ಕಾಲವಿತ್ತು. ಈಗಲೂ ಪುಸ್ತಕ ದ್ವೇಷವನ್ನು ಹರಡಲಾಗುತ್ತಿದೆ. ಪ್ರಶ್ನೆ ಮಾಡುವ ಮನಸ್ಸನ್ನು ಮುರುಟಿ ಹಾಕುವ ಯತ್ನ ನಡೆಯುತ್ತಿದೆ. ರಂಗಭೂಮಿ ಹಾಗೂ ಸಾಹಿತ್ಯ ಸದಾ ಪ್ರಶ್ನೆ ಮಾಡಲು ಪ್ರೇರೇಪಿಸುತ್ತವೆ. ಸ್ಥಗಿತಗೊಂಡ ಸಮಾಜವನ್ನು ಎಚ್ಚರಗೊಳಿಸುವ ಕೆಲಸ ನಿರಂತರವಾಗಿರಲಿ’ ಎಂದು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್, ಕಾವ್ಯ ಪರಿಷೆ ಮುಖ್ಯಸ್ಥರಾದ ಮಲ್ಲಿಕಾರ್ಜುನ ಮಹಾಮನೆ, ಕವಿ ಬಿ.ಎನ್.ಮಲ್ಲೇಶ್, ಎಚ್‌.ಆರ್.ಸ್ವಾಮಿ, ಅಕಾಡೆಮಿ ಸದಸ್ಯರಾದ ಮಮತಾ ಅರಸೀಕೆರೆ, ರವಿಕುಮಾರ್ ಭಾಗಿ ಉಪಸ್ಥಿತರಿದ್ದರು.

ರಂಗ ಸಂವಾದ: ನಾಟಕೋತ್ಸವದ ಅಂಗವಾಗಿ ರಂಗ ಸಂವಾದ ಹಮ್ಮಿಕೊಂಡಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಎಂ.ಎಸ್‌.ಜಯಕರ ಚಾಲನೆ ನೀಡಿದರು.

ಕವಿಗೋಷ್ಠಿಯಲ್ಲಿ ಬಜೆಟ್‌ ನೋಟ!

ಭಾರತ ರಂಗ ಉತ್ಸವದಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಶತಮಾನೋತ್ಸವ ಸಂಭ್ರಮ ಕವಿಗೋಷ್ಠಿಯಲ್ಲಿ ಕೇಂದ್ರ ಬಜೆಟ್‌ ಅನ್ನು ಸಾಹಿತಿಯೊಬ್ಬರು ಕಾವ್ಯ ಸಾಲುಗಳಲ್ಲಿ ವಿಶ್ಲೇಷಣೆ ಮಾಡಿದರು. ಸಂಬಂಧ ಎನ್ನುವ ಚುಟುಕುಗಳನ್ನು ವಾಚಿಸಿದ ಕವಿ ಟಿ.ಗೋವಿಂದರಾಜು ಅವರು ‘ಬಜೆಟ್‌ಗೂ ಸೀರೆಗೂ ಏನು ಸಂಬಂಧ. ಬಜೆಟ್‌ಗೆ ಒಂಬತ್ತು ಬಣ್ಣದ ಸ್ಯಾರಿ. ಬಜೆಟ್‌ ಎಂದರೆ ಭಾರೀ ಉಂಟು. ಹಲ್ವದಿಂದ ಬಜೆಟ್‌ ಆರಂಭಗೊಂಡರೂ ಜನರನ್ನು ಕೇಳಿ ಮಂಡನೆಯಂತೂ ಮಾಡೋಲ್ಲ ’ ಎಂದು ಪ್ರಸ್ತಾಪಿಸಿದರು. ಬ್ಯಾಡರಹಳ್ಳಿ ಶಿವರಾಜು ಅವರ ಸಾವುಂಟೆ ಗಾಂಧಿಗೆ ಪುನೀತ್‌ ತಥಾಗತ್‌ ಅವರ ಮದ್ದಿನ ಪುಡಿ ಪ್ರವೀಣ್‌ ಮೈಸೂರು ಅವರ ಯುದ್ದ ಯುದ್ದ ಎನ್ನುವ ಕವನಗಳು ಪ್ರಸ್ತುತ ಸನ್ನಿವೇಶದಿಂದ ಕೂಡಿದ್ದವು. ರುಕ್ಮಿಣಿ ನಾಯರ್ ಅಸಮಾನತೆ ಕುರಿತು ಪ್ರಕೃತಿ ಶೆಟ್ಟಿ ಹೆಣ್ಣು ಭ್ರೂಣ ಕಸ್ತೂರಿ ಪತ್ತಾರ ಅವರು ಬದುಕು ಚಂದ್ರ ಮೊಗೆರೆ ಟೂರ್‌ ಪ್ರಾಂತದಲ್ಲಿ ನವೆಂಬರ್ ತಿಂಗಳು ವಿಜಯಲಕ್ಷ್ಮಿ ನನ್ನೊಳಗೆ ನೀನು ಹಾಗೂ ಪದ್ಮಾ ಚಿನ್ಮಯಿ ರಸಪುರುಷ ಕವನ ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.