ಬೆಂಗಳೂರು: ಕೆ.ಗೊಲ್ಲಹಳ್ಳಿ ಮೈಲಾರಲಿಂಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಬ್ರಹ್ಮರಥೋತ್ಸವ ಅಂಗವಾಗಿ ಕಳಸಾರಾಧನೆ. ಗಾಯತ್ರಿ ಹೋಮ, ಮಹಾಗಣಪತಿ ಹೋಮ, ಹನುಮ ಹೋಮ, ನವಗ್ರಹ ಹೋಮ ಮತ್ತು ಮಹಾಚಂಡಿಕಾ ಹೋಮ ಮೊದಲಾದ ಪೂಜೆಗಳು ನಡೆದವು.
ಇದೇ ವೇಳೆ ಅರ್ಚಕರ ಪಟ್ಟಾಭಿಷೇಕ ಹಾಗೂ ಗೊರವಯ್ಯನಿಂದ ದೋಣಿ ಸೇವೆ ನಡೆಯಿತು.
ರಥೋತ್ಸವದ ನಿಮಿತ್ತ ಗ್ರಾಮವನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು.
ತಂಬಿಟ್ಟಿನ ಆರತಿ ಹೊತ್ತ ಮಹಿಳೆಯರು ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ ತಮಟೆ ವಾದನದ ಮೊದಲಾದ ಜನಪದ ಕಲಾತಂಡಗಳೊಂದಿಗೆ ಗ್ರಾಮದ ಪ್ರಮಖ ಬೀದಿಗಳಲ್ಲಿ ಸಾಗಿ ದೇವಸ್ಥಾನದ ಮುಂಭಾಗಕ್ಕೆ ಆಗಮಿಸಿದರು. ಪೂಜೆ ನೆರವೇರಿಸಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥೋತ್ಸವದ ನೇತೃತ್ವ ವಹಿಸಿದ್ದ ಪ್ರಧಾನ ಅರ್ಚಕ ಕೆ.ಎಂ.ಮಹೇಶ್, ‘ಹಬ್ಬ ಹರಿದಿನಗಳು ಸುತ್ತಮುತ್ತಲಿನ ಗ್ರಾಮಸ್ಥರು ಒಂದೆಡೆ ಸೇರಲು ಅನುಕೂಲ ಕಲ್ಪಿಸುತ್ತದೆ. ಆ ಮೂಲಕ ಬಾಂಧವ್ಯ ಬೆಸೆಯಲು ಸಹಕಾರಿ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.