ADVERTISEMENT

ವಿಮಾನ ನಿಲ್ದಾಣದಲ್ಲಿ ‘ಸರದಿ ನಿರ್ವಹಣಾ ವ್ಯವಸ್ಥೆ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 20:39 IST
Last Updated 4 ಸೆಪ್ಟೆಂಬರ್ 2020, 20:39 IST

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು (ಬಿಐಎಎಲ್‌) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಪ್ರಯಾಣಿಕರ ‘ಸರದಿ ನಿರ್ವಹಣಾ ವ್ಯವಸ್ಥೆ’ಯನ್ನು ಶುಕ್ರವಾರದಿಂದ ಜಾರಿಗೊಳಿಸಿದೆ.

ಕೊರೊನಾ ಸೋಂಕು ನಿಯಂತ್ರಣದ ಉದ್ದೇಶದಿಂದ ಈಗಾಗಲೇ ಸಂಪರ್ಕರಹಿತ ವ್ಯವಸ್ಥೆ ಜಾರಿಗೊಳಿಸಿರುವ ಬಿಐಎಎಲ್‌, ಸುಧಾರಿತ ಕ್ರಮವಾಗಿ ಈ ವ್ಯವಸ್ಥೆಯನ್ನು ಈಗ ಅಳವಡಿಸಿಕೊಂಡಿದೆ.

ವಿಮಾನ ನಿಲ್ದಾಣ ಪ್ರವೇಶದಿಂದ ವಿಮಾನ ಏರುವವರೆಗೆ ಇರುವ ಪ್ರತಿ ಕೌಂಟರ್‌ಗಳಲ್ಲಿ ಪ್ರಯಾಣಿಕರು ವ್ಯಯಿಸಬೇಕಾದ ಸಮಯದ ನಿಖರ ಮಾಹಿತಿಯನ್ನು ಈ ನೂತನ ವ್ಯವಸ್ಥೆಯು ನೀಡುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ನಿಲ್ದಾಣಕ್ಕೆ ಭೇಟಿ ನೀಡುವವರು, ನಿಲ್ದಾಣದಲ್ಲಿ ಎಷ್ಟು ಸಮಯ ಕಳೆಯಬೇಕಾಗುತ್ತದೆ ಎಂಬುದನ್ನು ಮುಂಚಿತವಾಗಿಯೇ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ದಟ್ಟಣೆ ಸಮಯದಲ್ಲಿ ಪ್ರಯಾಣಿಕರ ಹರಿವು ನಿರ್ವಹಣೆಗೂ ಅನುಕೂಲ ಆಗಲಿದೆ.

ADVERTISEMENT

ರೆವಿಸ್ ಪಿಟಿಎಸ್ ಸಂಸ್ಥೆ ಸಹಯೋಗದಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ಚೆಕ್‌ಇನ್, ಚೆಕ್‌ಔಟ್, ಸೆಕ್ಯುರಿಟಿ, ನಿರ್ಗಮನ ದ್ವಾರಗಳು ಸೇರಿದಂತೆ ವಿವಿಧ ಕೌಂಟರ್‌ಗಳಲ್ಲಿ ಒಟ್ಟಾರೆ 200 ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಅದು ಸರದಿಯಲ್ಲಿರುವ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಣ ಕೊಠಡಿಗೆ ರವಾನಿಸುತ್ತದೆ. ಅಲ್ಲಿಂದ ಡ್ಯಾಶ್‌ಬೋರ್ಡ್‌ನಲ್ಲಿ ನಿಮ್ಮ ಸರದಿಗಾಗಿ ಕಾಯುವಿಕೆ ಸಮಯವನ್ನು ಲೆಕ್ಕಾಚಾರ ಹಾಕಿ ಪ್ರಕಟಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.