ADVERTISEMENT

ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ಸೈಕ್ಲಿಂಗ್‌ ಪಥ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 3:08 IST
Last Updated 1 ಆಗಸ್ಟ್ 2021, 3:08 IST
ಸೈಕಲ್‌ ಏರಿದ ಸಿಎಂ ಬಸವರಾಜ ಬೊಮ್ಮಾಯಿ
ಸೈಕಲ್‌ ಏರಿದ ಸಿಎಂ ಬಸವರಾಜ ಬೊಮ್ಮಾಯಿ   

ಬೆಂಗಳೂರು: ನಗರದ ನಾಲ್ಕೂ ದಿಕ್ಕುಗಳಲ್ಲಿ ಅತ್ಯುತ್ತಮವಾದ ಸೈಕ್ಲಿಂಗ್‌ ಪಥಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರೀಡಾಪಟುಗಳನ್ನು ಬೆಂಬಲಿಸಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಸೈಕ್ಲಿಂಗ್‌ ಜಾಥಾಕ್ಕೆ ಭಾನುವಾರ ಬೆಳಿಗ್ಗೆ ವಿಧಾನಸೌಧದ ಮುಂಭಾಗದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

''ಒಲಿಂಪಿಕ್‌ನಲ್ಲಿ ಭಾಗವಹಿಸಿರುವ ಭಾರತೀಯ ಕ್ರೀಡಾಪಟುಗಳಿಗೆ ಬೆಂಬಲ ನೀಡುವ ಮೂಲಕ ಪ್ರೋತ್ಸಾಹ ತುಂಬಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯ. ಅದರ ಭಾಗವಾಗಿ ‘ಚಿಯರ್‌ ಇಂಡಿಯಾʼ ಎಂಬ ಕಾರ್ಯಕ್ರಮವನ್ನು ಪ್ರಧಾನಿ ಘೋಷಿಸಿದ್ದಾರೆ. ಸೈಕ್ಲಿಂಗ್‌ ಜಾಥಾ ಕೂಡ ಚಿಯರ್‌ ಇಂಡಿಯಾದ ಭಾಗವಾಗಿಯೇ ನಡೆಯುತ್ತಿರುವುದು ಸಂತೋಷ್‌ ಸಂಗತಿ" ಎಂದರು.

ADVERTISEMENT

ಶಿವರಾಮ ಕಾರಂತ ಬಡಾವಣೆಯಲ್ಲಿ ಸೈಕ್ಲಿಂಗ್‌ ಪಥ ನಿರ್ಮಿಸಬೇಕು ಎಂಬ ಬೇಡಿಕೆಯನ್ನು ಸಂಸದರಾದ ಪಿ.ಸಿ. ಮೋಹನ್‌ ಮುಂದಿಟ್ಟಿದ್ದಾರೆ. ಶಿವರಾಮ ಕಾರಂತ ಬಡಾವಣೆಯೂ ಸೇರಿದಂತೆ ನಗರದ ನಾಲ್ಕೂ ದಿಕ್ಕುಗಳಲ್ಲಿ ಸೈಕ್ಲಿಂಗ್‌ ಪಥ ನಿರ್ಮಿಸಲಾಗುವುದು ಎಂದು ಪ್ರಕಟಿಸಿದರು.

ಸಂಸದ ಡಿ.ವಿ. ಸದಾನಂದ ಗೌಡ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಂಸದ ತೇಜಸ್ವಿ ಸೂರ್ಯ, ಶಾಸಕ ಡಾ.ಕೆ. ಸುಧಾಕರ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಜತೆಗೆ ಕೆಲ ದೂರ ಸೈಕಲ್‌ ಸವಾರಿ ನಡೆಸಿದರು. ನಂತರ ಬಿಜೆಪಿ ಯುವ ಮೋರ್ಚಾ ಸದಸ್ಯರು ನಗರದ ವಿವಿಧೆಡೆ ಸೈಕ್ಲಿಂಗ್‌ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.