ಬೆಂಗಳೂರು: ನಾಗರಬಾವಿ ಬಳಿಯ ಹೊರ ವರ್ತುಲ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್ಸಿನ ಚಕ್ರ ತಲೆ ಮೇಲೆ ಹರಿದು ಬೈಕ್ವೊಂದರ ಹಿಂಬದಿ ಸವಾರ ಮೃತಪಟ್ಟಿದ್ದಾರೆ.
‘ಹೆಗ್ಗನಹಳ್ಳಿಯ ಮುರಳಿ (40) ಮೃತರು. ಪೇಟಿಂಗ್ ಕೆಲಸ ಮಾಡುತ್ತಿದ್ದ ಮುರುಳಿ, ಸ್ನೇಹಿತ ರಾಜು ಜೊತೆ ಬೈಕ್ನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಜ್ಞಾನಭಾರತಿ ಸಂಚಾರ ಠಾಣೆ ಪೊಲೀಸರು ತಿಳಿಸಿದರು.
‘ಮುರಳಿ ಹಾಗೂ ರಾಜು, ರಾತ್ರಿ ಮದ್ಯ ಕುಡಿದು ಮನೆಯತ್ತ ತೆರಳುತ್ತಿದ್ದರು. ರಾಜು ಬೈಕ್ ಚಲಾಯಿಸುತ್ತಿದ್ದರು. ಹಿಂಬದಿಯಲ್ಲಿ ಮುರಳಿ ಕುಳಿತಿದ್ದರು. ಮಾರ್ಗಮಧ್ಯೆ ಸವಾರನ ನಿಯಂತ್ರಣ ತಪ್ಪಿ ಬೈಕ್ ಉರುಳಿಬಿದ್ದಿತ್ತು. ಇಬ್ಬರೂ ರಸ್ತೆಗೆ ಬಿದ್ದಿದ್ದರು. ರಾಜು ಮಾತ್ರ ಮೇಲಕ್ಕೆ ಎದ್ದಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಮುರಳಿ ಮೇಲಕ್ಕೆ ಎದ್ದಿರಲಿಲ್ಲ.’
‘ಇದೇ ಮಾರ್ಗವಾಗಿ ಅತೀ ವೇಗದಲ್ಲಿ ಬರುತ್ತಿದ್ದ ಖಾಸಗಿ ಬಸ್ಸಿನ ಚಕ್ರ, ಮುರಳಿ ತಲೆ ಮೇಲೆ ಹರಿದಿತ್ತು ಎಂಬುದು ಗೊತ್ತಾಗಿದೆ. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.