ಬೆಂಗಳೂರು: ನೇಕಾರರ ಸಾಲ ಮನ್ನಾ ಕ್ರಮದಿಂದ ಸುಮಾರು 50 ಸಾವಿರ ನೇಕಾರರು ಪ್ರಯೋಜನ ಪಡೆಯಲಿದ್ದಾರೆ ಎಂದು ಬಿಜೆಪಿ ರಾಜ್ಯ ನೇಕಾರರ ಪ್ರಕೋಷ್ಠದ ಸಂಚಾಲಕ ಡಾ.ಜಿ.ರಮೇಶ್ ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿರುವ ನೇಕಾರರ ಸಾಲಮನ್ನಾ ಯೋಜನೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು, ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಹಾಗೂ ನೇಕಾರ ಸೇವಾ ಸಂಘಗಳಿಂದ ಸಾಲ ಪಡೆದಿರುವ ನೇಕಾರರ ಸಾಲ ಮನ್ನಾ ಆಗಲಿದೆ ಎಂದು ವಿವರಿಸಿದರು.
ಅಸಂಘಟಿತ ನೇಕಾರರು, ಸಹಕಾರ ಸಂಘಗಳ ವ್ಯಾಪ್ತಿಗೊಳಪಡುವ ನೇಕಾರರು, ಕೈಮಗ್ಗ ಅಭಿವೃದ್ಧಿ ನಿಗಮಗಳಲ್ಲಿ ದುಡಿಯುವ ನೇಕಾರರು ಮತ್ತು ವಿದ್ಯುತ್ ಚಾಲಿತ ಮಗ್ಗಗಳ ನೇಕಾರರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು.
ಆಗಸ್ಟ್ 7 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ನೇಕಾರರ ಸಮಾವೇಶ ನಡೆಸಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.