ADVERTISEMENT

32 ಲಕ್ಷ ಮನೆಗಳ ಮೇಲೆ ಬಿಜೆಪಿ ಬಾವುಟ: ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 20:44 IST
Last Updated 14 ಜನವರಿ 2023, 20:44 IST
   

ಬೆಂಗಳೂರು: ಜನವರಿ 2ರಿಂದ 12ರವರೆಗೆ ನಡೆದ ಬೂತ್‌ ವಿಜಯ ಅಭಿಯಾನದಲ್ಲಿ ರಾಜ್ಯದ 32 ಲಕ್ಷ ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಿಸಲಾಗಿದೆ ಎಂದು ಅಭಿಯಾನದ ಸಂಚಾಲಕರೂ ಆಗಿರುವ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಭಿಯಾನದ ಅವಧಿಯಲ್ಲಿ 51,872 ಮತಗಟ್ಟೆ ಹಂತದ ಸಮಿತಿ ರಚಿಸಿದ್ದು, 13.21 ಲಕ್ಷ ‘ಪೇಜ್‌ ಪ್ರಮುಖ’ರನ್ನು ನೇಮಕ ಮಾಡಲಾಗಿದೆ. ಕಾರ್ಯಕರ್ತರಿಗಾಗಿ 50,260 ವಾಟ್ಸ್‌ ಆ್ಯಪ್‌ ಗುಂಪುಗಳನ್ನು ರಚಿಸಲಾಗಿದೆ. 15.93 ಲಕ್ಷ ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ’ ಎಂದರು.

ಇನ್ನು ಕೆಲವು ದಿನಗಳಲ್ಲಿ ಒಟ್ಟು 50 ಲಕ್ಷ ಮನೆಗಳ ಮೇಲೆ ‍ಪಕ್ಷದ ಬಾವುಟ ಹಾರಿಸುವ ಗುರಿ ಸಾಧಿಸಲಾಗುವುದು. ಬೂತ್‌ ವಿಜಯ ಅಭಿಯಾನವೇ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಗಲಿದೆ ಎಂದು ಹೇಳಿದರು.

ADVERTISEMENT

ಅಭಿಯಾನದ ಸಹ ಸಂಚಾಲಕರಾಗಿರುವ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ಮಾತನಾಡಿ, ‘ಪ್ರತಿ ಮತಗಟ್ಟೆ ಹಂತದಲ್ಲೂ ಬಿಜೆಪಿ ಗೆಲುವು ಸಾಧಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರಿ ನೀಡಿದ್ದಾರೆ. ಈ ಅಭಿಯಾನದ ಮೂಲಕ ರಾಜ್ಯದ ಮನೆ, ಮನೆಯನ್ನೂ ತಲುಪುವ ಪ್ರಯತ್ನ ಆರಂಭವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.