
ವಿಮಾನ ನಿಲ್ದಾಣದ ಬಳಿ ನಿರ್ಮಾಣಗೊಂಡಿರುವ ನಮ್ಮ ಮೆಟ್ರೊ ನೀಲಿ ಮಾರ್ಗ
ಬೆಂಗಳೂರು: ‘ನಿಗದಿತ ಸಮಯದೊಳಗೆ ನೀಲಿ ಮೆಟ್ರೊ ಮಾರ್ಗ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು, ಕೆ.ಆರ್ ಪುರ–ಸಿಲ್ಕ್ ಬೋರ್ಡ್ ನಡುವೆ 2026 ಡಿಸೆಂಬರ್ನಲ್ಲಿ ಸಂಚಾರ ಆರಂಭಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೊಡಿಗೆಹಳ್ಳಿಯಲ್ಲಿ ಮೆಟ್ರೊ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಹೆಬ್ಬಾಳದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2027ರ ಜೂನ್ಗೆ ಹಾಗೂ ಕೆ.ಆರ್ ಪುರದಿಂದ ಹೆಬ್ಬಾಳದವರೆಗೆ 2027 ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಅದರಂತೆ ಪೂರ್ಣಗೊಳಿಸದೇ ಇದ್ದರೆ ಗುತ್ತಿಗೆದಾರರಿಗೆ ಮುಂದೆ ಯಾವುದೇ ಕಾಮಗಾರಿ ನೀಡುವುದಿಲ್ಲ’ ಎಂದು ಎಚ್ಚರಿಸಿದರು.
ಕೆಲಸ ಪೂರ್ಣವಾಗುವವರೆಗೂ ಇಲ್ಲಿರುವ ಪ್ರಮುಖ ಯಂತ್ರವನ್ನು ಬೆಂಗಳೂರಿನಿಂದಾಚೆಗೆ ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ. ಇದರ ಉಸ್ತುವಾರಿಯನ್ನು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ನೀಡಲಾಗಿದೆ ಎಂದರು.
‘ಬಿಎಂಆರ್ಡಿಎ, ಬಿಡಿಎ, ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗಳಲ್ಲಿ ಏನೆಲ್ಲ ಆಗಬೇಕಿದೆ ಎಂದು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ ವಿಚಾರದಲ್ಲಿ ಸರ್ಕಾರದ ಪರಿಹಾರಕ್ಕೆ ಒಪ್ಪಿ ಭೂಮಿ ನೀಡುವ ರೈತರಿಗೆ ತೀರ್ಮಾನ ಮಾಡಲಾಗಿರುವ ಪರಿಹಾರವನ್ನು ನೀಡುತ್ತೇವೆ. ಯಾರು ಒಪ್ಪುವುದಿಲ್ಲವೋ ಅವರಿಗೆ ನ್ಯಾಯಾಲಯದಲ್ಲಿ ಹಳೆಯ ದರದಲ್ಲಿ ಡೆಪಾಸಿಟ್ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.