ರಾಜರಾಜೇಶ್ವರಿನಗರ: ಉಲ್ಲಾಳು ವಾರ್ಡ್ನ ನಾಗದೇವನಹಳ್ಳಿ ಹಾಗೂ ಡಿ.ದೇವರಾಜು ಅರಸು ಬಡಾವಣೆಯಲ್ಲಿ ಮುಖ್ಯರಸ್ತೆ ಹಾಗೂ ಅಡ್ಡ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುತ್ತಿದ್ದು ಅಲ್ಲಿ ಮರಗಳ ಬುಡಕ್ಕೆ ಡಾಂಬರು ಹಾಕಲಾಗಿದೆ. ಇದಕ್ಕೆ ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಸ್ತೆಯ ಪಕ್ಕದಲ್ಲಿ, ಪಾದಚಾರಿ ಮಾರ್ಗದ ಪಕ್ಕದಲ್ಲಿರುವ ಹತ್ತಾರು ಮರಗಳ ಬುಡಗಳಿಗೆ ಡಾಂಬರು ಸುರಿದು ಮರಗಳ ನಾಶಕ್ಕೆ ಕಾರಣ ಆಗುತ್ತಿರುವುದು ಎಷ್ಟು ಸರಿ ಎಂದು ನಾಗದೇವನಹಳ್ಳಿ ನಿವಾಸಿ ಆರ್. ಮಂಗಳಾ ಅವರು ಆಕ್ರೋಶ ವ್ಯಕ್ತಪಡಿಸಿದರು.
ಹತ್ತಾರು ವರ್ಷಗಳಿಂದ ಬೆಳೆಸಿರುವ ಮರಗಳ ಬುಡಕ್ಕೆ ಮತ್ತು ವರ್ಷದ ಹಿಂದೆ ನೆಟ್ಟಿರುವ ಮರಗಳ ಸುತ್ತಲೂ ನೀರು ಬೇರು ಸೇರದಂತೆ ಮಾಡಲಾಗಿದೆ. ಮರಗಳ ಬೆಳವಣಿಗೆಗೆ ನೀರು ಮತ್ತು ಪೋಷಕಾಂಶ ಅಗತ್ಯ. ಹೊಸದಾಗಿ ಬೆಳೆಯುತ್ತಿರುವ ಬೇರುಗಳು ಆಳವಾಗಿ ನೆಲದಾಳಕ್ಕೆ ಹೋಗುವುದಿಲ್ಲ ಎಂದರು.
‘ರಸ್ತೆ, ಪಾದಚಾರಿ ಮಾರ್ಗದಲ್ಲಿರುವ ಮರಗಳ ಬುಡಕ್ಕೆ ಡಾಂಬರು, ಕಾಂಕ್ರೀಟ್ ಹಾಕುವಂತಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡುತ್ತೇನೆ. ಮರಗಳ ಬುಡಕ್ಕೆ ಹಾಕಿರುವ ಡಾಂಬರು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಕಾರ್ಯಪಾಲಕ (ಕಾಮಗಾರಿ) ಎಂಜಿನಿಯರ್ ಬಿ.ರಾಜಣ್ಣ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.