ಬೆಂಗಳೂರು: ಕೋವಿಡ್ ಬಿಕ್ಕಟ್ಟು ಮತ್ತು ಲಾಕ್ಡೌನ್ ಕಾರಣ ಮೆಟ್ರೊ ರೈಲು ಸಂಚಾರ ಸೇವೆ ಸ್ಥಗಿತಗೊಂಡಿದ್ದು, ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್ಸಿಎಲ್) ವರಮಾನವೇ ಇಲ್ಲದಂತಾಗಿದೆ. ಸಿಬ್ಬಂದಿ ವೇತನ ಪಾವತಿ ಮತ್ತು ನಿರ್ವಹಣಾ ವೆಚ್ಚ ನಿಭಾಯಿಸಲು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ನಿಗಮವಿದೆ.
’ಸಿಬ್ಬಂದಿ ವೇತನ, ನಿರ್ವಹಣಾ ವೆಚ್ಚ ಮತ್ತಿತರ ಉದ್ದೇಶಕ್ಕೆ ನಿಗಮಕ್ಕೆ ಸದ್ಯ ನಿಗಮಕ್ಕೆ ₹ 300 ಕೋಟಿ ಅವಶ್ಯಕತೆ ಇದೆ. ಈ ಮೊತ್ತವನ್ನು ಬ್ಯಾಂಕುಗಳಿಂದ ಸಾಲವಾಗಿ ತೆಗೆದುಕೊಳ್ಳಲು ರಾಜ್ಯಸರ್ಕಾರದ ಅನುಮತಿ ಕೋರುವ ಉದ್ದೇಶವಿದೆ’ ಎಂದು ನಿಗಮದ ಮೂಲಗಳು ಹೇಳಿವೆ.
‘ನಮ್ಮ ಮೆಟ್ರೊ ನಿರ್ವಹಣಾ ವೆಚ್ಚವೇ ತಿಂಗಳಿಗೆ ₹ 31 ಕೋಟಿಯಷ್ಟಿದೆ. ಈಗ ರೈಲು ಸಂಚರಿಸುತ್ತಿಲ್ಲವಾದ್ದರಿಂದ ₹ 8 ಕೋಟಿಯಷ್ಟು ವಿದ್ಯುತ್ ಶುಲ್ಕ ಕಡಿಮೆ ಬರುತ್ತಿದೆ. ಆದರೆ, ಸಿಬ್ಬಂದಿ ವೇತನ ಮತ್ತು ನಿರ್ವಹಣೆಗೆ ತಿಂಗಳಿಗೆ ₹ 21 ಕೋಟಿ ಬೇಕು. ಇದಲ್ಲದೆ, ಮೊದಲ ಹಂತದಲ್ಲಿ ಮಾಡಿದ ಸಾಲದ ಕಂತು ಪಾವತಿಸಲು ₹ 12 ಕೋಟಿ ಬೇಕಾಗುತ್ತದೆ’ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
‘ರಾಜ್ಯಸರ್ಕಾರ ಮತ್ತು ಬಿಎಂಆರ್ಸಿಎಲ್ ನಡುವಣ ಒಪ್ಪಂದದನ್ವಯ, ವರಮಾನ ಮತ್ತು ಸಾಲಮರುಪಾವತಿ ನಡುವಣ ವ್ಯತ್ಯಾಸವನ್ನು ತಗ್ಗಿಸಲು ಸರ್ಕಾರ ನೆರವು ನೀಡಬೇಕು. ಆದರೆ, ಈಗ ಸರ್ಕಾರವೇ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಅಲ್ಲದೆ, ಎರಡನೇ ಹಂತದ ಯೋಜನೆ ಅನುಷ್ಠಾನಕ್ಕೂ ಸರ್ಕಾರದ ನೆರವು ಬೇಕಾಗಿದೆ. ಈ ಸಂದರ್ಭದಲ್ಲಿ ಬ್ಯಾಂಕುಗಳಿಂದ ಸಾಲ ಪಡೆಯುವುದು ಅನಿವಾರ್ಯವಾಗಿದೆ’ ಎಂದು ಮೂಲಗಳು ತಿಳಿಸಿವೆ.
ಇತರೆ ವರಮಾನವೂ ಕುಸಿತ:‘ಟಿಕೆಟ್ ಮಾರಾಟದಿಂದ ಬರುವ ಆದಾಯ ಕುಸಿದಿರುವುದು ಮಾತ್ರವಲ್ಲದೆ, ಜಾಹೀರಾತು, ಮಳಿಗೆ ಬಾಡಿಗೆ ಸೇರಿದಂತೆ ಬೇರೆ ಮೂಲಗಳಿಂದ ಬರುತ್ತಿದ್ದ ಆದಾಯವೂ ಶೇ 82ರಷ್ಟು ಕುಸಿದಿದೆ. ಮೊದಲು ₹ 418 ಕೋಟಿಯವರೆಗೆ ಈ ಮೂಲಗಳಿಂದ ನಿಗಮಕ್ಕೆ ಆದಾಯ ಬರುತ್ತಿತ್ತು. 2020–21ರಲ್ಲಿ ಇದು ₹ 78 ಕೋಟಿ ಮಾತ್ರ ಆಗಿದೆ.
ಏಪ್ರಿಲ್ನಲ್ಲಿ ಭಾಗಶಃ ರೈಲು ಸಂಚಾರ ನಡೆಸಿದರೂ, ಟಿಕೆಟ್ ಮಾರಾಟದಿಂದ ಬಂದ ಆದಾಯ ತಿಂಗಳಿಗೆ ₹ 9.42 ಕೋಟಿ ಮಾತ್ರ. ಕೋವಿಡ್ಗಿಂತ ಪೂರ್ವದಲ್ಲಿ ತಿಂಗಳಿಗೆ ಸರಾಸರಿ ₹ 35 ಕೋಟಿ ವರಮಾನ ನಿಗಮಕ್ಕೆ ಬರುತ್ತಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.