ADVERTISEMENT

ಬೆಂಗಳೂರು | ಕುಖ್ಯಾತ ಕಳ್ಳ ಬಾಂಬೆ ಸಲೀಂನಿಗೆ ಆಶ್ರಯ: ಕಾನ್‌ಸ್ಟೆಬಲ್‌ ಅಮಾನತು

ಪೊಲೀಸ್‌ ಸಮವಸ್ತ್ರ ಧರಿಸಿ ಪತ್ನಿಗೆ ಕರೆ ಮಾಡುತ್ತಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 21:11 IST
Last Updated 7 ಆಗಸ್ಟ್ 2025, 21:11 IST
ಬಾಂಬೆ ಸಲೀಂ
ಬಾಂಬೆ ಸಲೀಂ   

ಬೆಂಗಳೂರು: ಕುಖ್ಯಾತ ಕಳ್ಳ ಬಾಂಬೆ ಸಲೀಂಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದ ಕಾನ್‌ಸ್ಟೆಬಲ್‌ವೊಬ್ಬರನ್ನು ಗುರುವಾರ ಅಮಾನತು ಮಾಡಲಾಗಿದೆ.

ಗೋವಿಂದಪುರ ಠಾಣೆಯ ಕಾನ್‌ಸ್ಟೆಬಲ್‌ ಎಚ್.ಆರ್.ಸೋನಾರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಪೂರ್ವ ವಿಭಾಗದ ಡಿಸಿಪಿ ದೇವರಾಜು ಆದೇಶ ಹೊರಡಿಸಿದ್ದಾರೆ.

ಆಡುಗೋಡಿಯ ಪೊಲೀಸ್ ವಸತಿ ಸಮುಚ್ಚಯದಲ್ಲಿ ಕಾನ್‌ಸ್ಟೆಬಲ್‌ ಸೋನಾರ ಅವರು ನೆಲಸಿದ್ದರು. ಆ ಮನೆಯಲ್ಲಿ ಕೆಲವು ತಿಂಗಳು ವಾಸವಿದ್ದ ಸಲೀಂ ಎಂಬಾತ, ಸೋನಾರ ಅವರ ಪೊಲೀಸ್ ಸಮವಸ್ತ್ರ ಧರಿಸಿ ತನ್ನ ಪತ್ನಿಗೆ ವಿಡಿಯೊ ಕರೆ ಮಾಡುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ. 

ADVERTISEMENT

‘ಕಳ್ಳನಾದರೂ ಪೊಲೀಸರ ಮನೆಯಲ್ಲಿದ್ದೇನೆ. ಅವರದ್ದೇ ಸಮವಸ್ತ್ರ ಧರಿಸಿದ್ದೇನೆ ನೋಡು’ ಎಂದು ಪತ್ನಿಗೆ ವಿಡಿಯೊ ಕರೆ ಮಾಡಿ ತಿಳಿಸಿದ್ದ. ವಿಡಿಯೊ ಕರೆ ಮಾಡಿದ್ದ ವೇಳೆ ಸ್ಕ್ರೀನ್‌ಶಾಟ್‌ ಸಹ ತೆಗೆದುಕೊಂಡಿದ್ದ ಎಂದು ಪೊಲೀಸರು ಹೇಳಿದರು.

ಡಿಫೆನ್ಸ್‌ ಕಾಲೊನಿಯಲ್ಲಿ ವಾಸವಿದ್ದ ವೈದ್ಯರೊಬ್ಬರ ಮನೆಯಲ್ಲಿ ಜೂನ್‌ 22ರಂದು ಚಿನ್ನಾಭರಣ ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಇಂದಿರಾನಗರ ಠಾಣೆಯ ಪೊಲೀಸರು ಆರೋಪಿ ಬಾಂಬೆ ಸಲೀಂನನ್ನು ಬಂಧಿಸಿದ್ದರು. ಆರೋಪಿ ಕದ್ದಿದ್ದ ಸುಮಾರು ₹15 ಲಕ್ಷ ಮೌಲ್ಯದ ಆಭರಣ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದರು.

ಮೊಬೈಲ್‌ ಪರಿಶೀಲನೆ ವೇಳೆ ಬಯಲು: ಜಪ್ತಿ ಮಾಡಿಕೊಂಡ ಮೊಬೈಲ್‌ ಅನ್ನು ಇಂದಿರಾನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸುವಾಗ ಆರೋಪಿ ಪೊಲೀಸ್ ಸಮವಸ್ತ್ರ ಧರಿಸಿದ್ದ ಪೋಟೊಗಳು ಪತ್ತೆ ಆಗಿದ್ದವು. ಜತೆಗೆ, ಅವನು ಧರಿಸಿದ್ದ ಸಮವಸ್ತ್ರದಲ್ಲಿ ನಂಬರ್‌ಪ್ಲೇಟ್‌ನಲ್ಲಿ ಎಚ್.ಆರ್. ಸೋನಾರ ಹೆಸರಿತ್ತು. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಿದಾಗ ‘ಕೆಲವು ತಿಂಗಳ ಹಿಂದೆ ಕಾನ್‌ಸ್ಟೆಬಲ್‌ ಸೋನಾರ ಮನೆಯಲ್ಲಿ ವಾಸವಿದ್ದಾಗ ಪೊಲೀಸ್‌ ಸಮವಸ್ತ್ರ ಧರಿಸಿ ಪತ್ನಿಗೆ ಕರೆ ಮಾಡಿದ್ದೆ’ಎಂದು ಹೇಳಿಕೆ ನೀಡಿದ್ದ ಎಂಬುದು ಗೊತ್ತಾಗಿದೆ.

‘ಕರ್ತವ್ಯದಲ್ಲಿ ದುರ್ನಡತೆ ಹಾಗೂ ಶಿಸ್ತು ಉಲ್ಲಂಘಿಸಿದ್ದ ಕಾನ್‌ಸ್ಟೆಬಲ್‌ ಸೋನಾರ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ’ ಎಂದು ಡಿಸಿಪಿ ದೇವರಾಜು ಸ್ಪಷ್ಟಪಡಿಸಿದರು.

ಮೈಸೂರಿನ ಸಲೀಂ ಮುಂಬೈಯಲ್ಲಿ ವಾ

ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮನೆಗಳಿಗೆ ಕನ್ನ ಹಾಕುವುದರಲ್ಲಿ ಸಲೀಂ ಅಲಿಯಾಸ್ ಬಾಂಬೆ ಸಲೀಂ ಕುಖ್ಯಾತನಾಗಿದ್ದ. ಈತನ ವಿರುದ್ಧ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೆಲವು ತಿಂಗಳ ಹಿಂದೆ ಗೋವಿಂದಪುರ ಠಾಣೆ ಪೊಲೀಸರು ಸಲೀಂನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರಬಂದ ಬಳಿಕವೂ ಪುನಃ ಕಳ್ಳತನ ಮಾಡುತ್ತಿದ್ದ. ಮೈಸೂರು ಜಿಲ್ಲೆಯ ಹುಣಸೂರು ಮೂಲದ ಸಲೀಂ ಮುಂಬೈಯಲ್ಲಿ ಪತ್ನಿ ಜತೆಗೆ ನೆಲಸಿದ್ದ. ಹೀಗಾಗಿಯೇ ಬಾಂಬೆ ಸಲೀಂ ಎಂಬ ಅಡ್ಡ ಹೆಸರು ಬಂದಿತ್ತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡಿ ಚಿನ್ನಾಭರಣಗಳನ್ನು ಮುಂಬೈಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದ. ಬಂದ ಹಣದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.